ಧಾರವಾಡ prajakiran.com : ಧಾರವಾಡದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮೀಪದ ಇಟ್ಟಿಗಟ್ಟಿ ಕ್ರಾಸ್ ಬಳಿ ಫೆ. 6ರಂದು ಶನಿವಾರ ಸಾಮೂಹಿಕ ಪ್ರಾರ್ಥನೆ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಇದರಲ್ಲಿ 14 ಕುಟುಂಬಗಳ 50ಕ್ಕೂ ಹೆಚ್ಚು ಸದಸ್ಯರು ದಾವಣಗೆರೆಯಿಂದ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಮ್ಮ ಕುಟುಂಬಗಳಿಗೆ ಆಗಿರುವಅನ್ಯಾಯ ಮತ್ತೊಂದು ಕುಟುಂಬಕ್ಕೆ ಆಗಬಾರದು ಎಂಬ ಕಾಳಜಿಯೊಂದಿಗೆ ಈ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಲಿದ್ದಾರೆ.
ಅವರೆಲ್ಲರೂ ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.
ಈ ರಾಷ್ಟ್ರೀಯ ಹೆದ್ದಾರಿ ಆರು ಪಥಗಳ ರಸ್ತೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ರಸ್ತೆ ಮಾತ್ರ ಎಕಪಥವಾಗಿದೆ.
ಬೈಪಾಸ್ ಕೂಡ ಇಕ್ಕಟ್ಟಾಗಿದೆ. ನಮ್ಮ ಹುಬ್ಬಳ್ಳಿ-ಧಾರವಾಡ ಹೈವೇ ಎಂದು ಈವರೆಗೆ ಘೋಷಣೆಯಾಗಿಲ್ಲ. ಇದು ನಾಚಿಕೆಗೇಡಿನ ಸಂಗತಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಅಧೀಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಗುತ್ತಿಗೆದಾರ ಅಶೋಕ ಖೇಣಿ ಗಂಜಿಕೇಂದ್ರದ ಫಲಾನುಭವಿಗಳಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಈ ರಸ್ತೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ತಾಂತ್ರಿಕತೆಯಿಂದ ಕೂಡಿಲ್ಲ.ಹೆದ್ದಾರಿ ಅಪಘಾತ ಸಂಭವಿಸಿದರೆ, ಅಂಬುಲೆನ್ಸ್ ಇಲ್ಲ. ಕ್ರೇನ್ ಇಲ್ಲ. ತುರ್ತು ಸೇವೆಗೆ ಸಿಬ್ಬಂದಿಯಿಲ್ಲ.
ಕ್ರೇನ್ ಬಳಕೆಯ ಹಣವನ್ನು ಕುಟುಂಬದವರಿಂದ ವಸೂಲಿ ಮಾಡುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಅಧಿಕಾರಿ ಹಾಗೂ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯ ಮೇಲೆ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಗಡುವು ನೀಡಲಾಗಿದೆ ಎಂದು ಹೇಳಿದರು.
ರಿಪೇರಿ ಮಾಡುವ ರಸ್ತೆಯ ಟೋಲ್ ಸಂಗ್ರಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಎರಡು ತಿಂಗಳ ಗಡುವು ನೀಡಲಾಗಿದೆ.
ಒಂದು ವೇಳೆ ಅವರು ಸ್ಥಗಿತಗೊಳಿಸದಿದ್ದರೆ ಟೋಲ್ ಬಂದ್ ಮಾಡುವ ಕೆಲಸ ನಾವೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋಲ್ಲಾಪುರ-ಸಾಂಗ್ಲಿ 16 ಟೋಲ್ ಗಳನ್ನು ಸಂಸದ ರಾಜು ಶೆಟ್ಟಿ ನೇತೃತ್ವದಲ್ಲಿ ರೈತರು ಬಂದ್ ಮಾಡಿಸಿದ್ದಾರೆ. ಅಂತಹ ಹೋರಾಟ ಬರುವ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಜಿಲ್ಲೆಯ ಕೇಂದ್ರ ಸಚಿವರು, ಶಾಸಕರು ಏನೂ ಮಾಡುತ್ತಿದ್ದಾರೆ. 30 ಕಿ,,ಮೀ ಹೆದ್ದಾರಿ ಅಗಲೀಕರಣ, ಬೈಪಾಸ್ ಸರ್ವೀಸ್ ರಸ್ತೆ ವಿಸ್ತಾರ ಮಾಡಲು ತಾಂತ್ರಿಕಅಡೆತಡೆಗಳಿಲ್ಲ. ಜ. 27ರಂದು ಸಭೆ ನಡೆಸುವುದಾಗಿ ಹೇಳಿದ್ದರು.
ಈವರೆಗೆ ಯಾರೊಬ್ಬರು ಚಕಾರ ಎತ್ತಿಲ್ಲ. ಕೇಂದ್ರದಲ್ಲಿ ರಾಜ್ಯದ ಮೂವರು ಸಚಿವರಿದ್ದರು ಉಪಯೋಗವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
14 ಕುಟುಂಬಗಳ ಸಂತ್ರಸ್ತ್ರರು ಸ್ವಯಂಪ್ರೇರಿತವಾಗಿ ಧಾರವಾಡದ ಇಟ್ಟಿಗಟ್ಟಿ ಬೈಪಾಸ್ ಗೆ ಆಗಮಿಸಿ, ಪೂಜೆ,ಪ್ರಾರ್ಥನೆ ಸಲ್ಲಿಸಿ ಹೋರಾಟ ನಡೆಸುವ ಕೆಲಸಕ್ಕೆ ಮುಂದಾಗಿದ್ದರಿಂದ ಅವರಿಗೆ ನೋವು ಭರಿಸುವ ಶಕ್ತಿ ಕೊಡುವ ಕೆಲಸ ಧಾರವಾಡ, ಹುಬ್ಬಳ್ಳಿಯ ಸ್ವಾಭಿಮಾನಿ ಜನತೆ ಮಾಡಬೇಕಿದೆ.
ಹೀಗಾಗಿ ನಾವೆಲ್ಲ ಸ್ವಯಂಪ್ರೇರಿತವಾಗಿ ಪಕ್ಷಾತೀತವಾಗಿ ನಡೆಯುವ ಈ ಹೋರಾಟದಲ್ಲಿ ಪಾಲ್ಗೊಂಡು ಅವರ ನೋವು ಕಡಿಮೆ ಮಾಡುವ ಕೆಲಸ ಮಾಡಬೇಕಿದೆ ಎಂದು ಕೆ.ಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಅಭಿಪ್ರಾಯಪಟ್ಟರು.