ವರದಿ : ಪ್ರಶಾಂತ ಹೂಗಾರ
ಧಾರವಾಡ prajakiran.com: ಧಾರವಾಡದ ಡಿಪೋ ಸರ್ಕಲ್ ಹತ್ತಿರ ಮನೆಯಲ್ಲಿಯೇ ಯುವಕನೋರ್ವನನ್ನು
ಮಾರಕಾಸ್ತ್ರದಿಂದ ಹೊಡೆದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಕೆಲವೇ ಸಮಯದ ಹಿಂದೆ ನಡೆದಿದೆ.
ಕೊಲೆಯಾದ ಯುವಕನನ್ನು ಆಕಾಶ ಕೋಟೂರ (30) ಎಂದು ಗುರುತಿಸಲಾಗಿದೆ.
ಮೃತ ಆಕಾಶ ಮನೆಯಲ್ಲಿ ಪದೇ ಪದೇ ಗಲಾಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆತನ ಸಹೋದರನೇ ಕೊಲೆ ಮಾಡಿದ್ದಾನೆ.
ಪ್ರತಿ ದಿನದಂತೆ ಇಂದು ಕೂಡಾ ಸುಖಾಸುಮ್ಮನೆ ಕುಡಿದು ಬಂದು ಮನೆಯಲ್ಲಿ ದಾಂಧಲೆ ಆರಂಭಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಣ್ಣ ಪ್ರಕಾಶ, ಕಬ್ಬಿಣದ ರಾಡ್ ನಿಂದ ಹೊಡೆದು ತಮ್ಮ ಆಕಾಶನನ್ನು ಕೊಲೆ ಮಾಡಿದ್ದಾನೆ. ಈ ದುರ್ಘಟನೆಯಿಂದ ಮನೆಯಲ್ಲಾ ರಕ್ತಸಿಕ್ತವಾಗಿದೆ.
ಧಾರವಾಡದ ಡಿಪೋ ಬಳಿಯ ಮನೆಯಲ್ಲಿ ಆಕಾಶ ಕೋಟೂರ ಎಂಬ 30 ವರ್ಷದ ಯುವಕನ ಕೊಲೆಯಾದ ಸುದ್ದಿ ಹೊರ ಬಂದ ತಕ್ಷಣವೇ ಧಾರವಾಡ ಉಪನಗರ ಠಾಣೆಯ ಪೊಲೀಸರು, ಸ್ಥಳಕ್ಕೆ ಆಗಮಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ತನ್ನ ಮೇಲೆ ಅತಿಯಾದ ಅಭಿಮಾನ ಹೊಂದಿದ್ದ
ಆಕಾಶ ಕೋಟೂರ ತನ್ನದೇ ಟ್ಯಾಟುವನ್ನ ಎದೆಯ ಮೇಲೆ ಹಾಕಿಸಿಕೊಂಡು, ಎಲ್ಲರಿಗೂ ತೋರಿಸಿಕೊಳ್ಳುತ್ತಿದ್ದ. ಈತ ಮನೆಯಲ್ಲಿ ಮಾತ್ರ ಗಲಾಟೆಗೆ ಕಾರಣವಾಗುತ್ತಿದ್ದ ಎಂದು ಹೇಳಲಾಗಿದೆ.
ಹತ್ಯೆಯಾದ ಯುವಕನ ತಂದೆ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದು, ಕೂಡು ಕುಟುಂಬದಲ್ಲಿದ್ದ ಆಕಾಶನ ಕಿರಿಕಿರಿಯಿಂದ ಕೊಲೆ ನಡೆದಿರುವುದಾಗಿ ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದು, ಇನ್ನೂ ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆದಿದೆ ಎಂದು ಹೇಳಿದರು.