ಬೆಂಗಳೂರು prajakiran.com : ಬ್ಲೂ ಟೂತ್ ಬಳಸಿ ಪಿ ಎಸ್ ಐ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ಮೂವರ ವಿರುದ್ದ ಸಿಐಡಿ ಪೊಲೀಸರು ಮತ್ತೆ ಮೂರು ಪ್ರತ್ಯೇಕವಾದ ಪ್ರಕರಣ ದಾಖಲಿಸಿದೆ.
ಅಕ್ರಮ ನಡೆಸಿದವರ ವಿವರ ;
ಬೆಂಗಳೂರಿನ ಎಚ್ಎಎಲ್ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಲಕ್ಕಪ್ಪ ಪಿ ಎಸ್ ಐ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿ ಕೋಟಾದಲ್ಲಿ 6 ನೇ ರ್ಯಾಂಕ್ ಪಡೆದಿದ್ದ.
ಇತನ ವಿರುದ್ಧ ಈಗ ಸಿಐಡಿ ತಂಡ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈತ ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದವ ಎಂದು ಗೊತ್ತಾಗಿದೆ.
ಅದೇ ರೀತಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಶ್ರೀಶೈಲ ಬಿರಾದಾರ ರಾಜ್ಯಕ್ಕೆ 57 ನೇ ರ್ಯಾಂಕ್ ಬಂದಿದ್ದ.
ಇತ ತುಮಕೂರಿನ ಸಿದ್ದಗಂಗಾ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ. ಇತನ ವಿರುದ್ಧ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಧಾರವಾಡ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಶ್ರೀಮಂತ ಸಾತಪುರೆ ರಾಜ್ಯಕ್ಕೆ 63ನೇ ರ್ಯಾಂಕ್ ಬಂದಿದ್ದ.
ಇತನ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿ 1 ಎಂದು ಪ್ರಕರಣ ದಾಖಲಿಸಲಾಗಿದೆ.
ಈ ಮೂವರು 545 ಪಿ ಎಸ್ ಐ ಅಕ್ರಮ ನೇಮಕಾತಿ ಕಿಂಗ್ ಪಿನ್ ರುದ್ರಗೌಡ ಪಾಟೀಲ ಜೊತೆಗೆ ತಲಾ ಮೂವತ್ತು ಲಕ್ಷಕ್ಕೆ ಡೀಲ್ ಕುದುರಿಸಿದ್ದರು.
ಅಲ್ಲದೆ, ತಲಾ ಹತ್ತು ಲಕ್ಷ ಮುಂಗಡ ಪಾವತಿಸಿದ್ದರು ಎಂಬುದು ಸಿಐಡಿ ತನಿಖೆ ವೇಳೆ ಬಯಲಿಗೆ ಬಂದಿತ್ತು. ಇದೀಗ ಈ ಮೂವರ ಹೆಡೆಮುರಿಗೆ ಕಟ್ಟಿದ ಸಿಐಡಿ ತಂಡ ಇನ್ನು ಯಾರೆಲ್ಲರನ್ನು ಖೆಡ್ಡಾಗೆ ಬೀಳಿಸುತ್ತಾರೆ ಎಂಬುದು ಕಾದು ನೋಡಬೇಕು.