ಧಾರವಾಡ prajakiran.com : ಧಾರವಾಡದ ಸಪ್ತಾಪುರದಲ್ಲಿರುವ ಒನ್ ಹಾಗೂ ಎರಡು ಗೌರಿಶಂಕರ ಹಾಸ್ಟೆಲ್ ನ ಮೂರನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪರೀಕ್ಷೆ ಮುಗಿದಿದೆ ಊರಿಗೆ ಹೋಗಿ ಎಂದು ಹೊರಹಾಕಲಾಗಿದೆ.
ಅಲ್ಲದೆ, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳ ದಿನಬಳಕೆ ಸಾಮಾಗ್ರಿಗಳನ್ನು ಹೊರಕ್ಕೆ ಎಸೆಯಲಾಗಿದೆ. ಜೊತೆಗೆ ಎಲ್ಲಿ ಬೇಕೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಇನ್ನು ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಬುಧವಾರ ರಾತ್ರಿ ಊಟ ನೀಡಿದ ಬಳಿಕ ಗುರುವಾರ ದಿನವೀಡಿ ಒಬ್ಬ ವಿದ್ಯಾರ್ಥಿಗೂ ಉಪಹಾರವಾಗಲಿ, ಊಟವಾಗಲಿ ನೀಡಿಲ್ಲ.
ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ಉಪವಾಸ ಪರದಾಡುತ್ತಿದ್ದಾರೆ. ಈ ಬಗ್ಗೆ ಪ್ರಜಾಕಿರಣ. ಕಾಮ್ ಗೆ ಕರೆ ಮಾಡಿ ವಿವರ ನೀಡಿದರು.
ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಂಬರ್ ಅವರ ಗಮನ ಸೆಳೆಯಲು ಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.
ಇದರಿಂದಾಗಿ ಆನಂತರ ವಾರ್ಡನ್ ಮಂಜುನಾಥ ಲಮಾಣಿಯನ್ನು ಸಂಪರ್ಕಿಸಿದರೆ, ಪರೀಕ್ಷೆ ಬರೆದವರಿಗೆ ಹೋಗಲು ಹೇಳಿದ್ದೇನೆ. ಉಳಿದವರಿಗೆ ಅಲ್ಲ ಎಂದು ನುಣುಚಿಕೊಂಡರು.
ಜೊತೆಗೆ ಅವರಿಗೆ ದಿನವೀಡಿ ಉಪಹಾರ, ಊಟ ನೀಡಿಲ್ಲ ಏಕೆ ಎಂದು ಕೇಳಿದರೆ ಮೇಲಾಧಿಕಾರಿಗಳಿಂದ ಆದೇಶವಿದೆ ಎಂದು ಸಮಜಾಯಿಸಿ ನೀಡುವ ಜೊತೆಗೆ ರಾತ್ರಿ ವೇಳೆ ನೀವು ಯಾರ ಪರವಾನಿಗೆ ಇಲ್ಲದೆ ಹಾಸ್ಟೆಲ್ ಹೇಗೆ ಪ್ರವೇಶ ಮಾಡಿದಿರಿ, ನಾವು ಎಸ್ಸಿ ಎಸ್ಟಿ ಯವರು ಎಂದು ತಮ್ಮ ತಪ್ಪುಗಳನ್ನು ಮುಚ್ಚಿಹಾಕುವ ಕಸರತ್ತು ಮಾಡಿದ.
ದುರಂತದ ಸಂಗತಿಯೆಂದರೆ ಈ ಹಾಸ್ಟೆಲ್ ನಲ್ಲಿರುವ ನೂರಾರು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಸರಕಾರ ಅವರಿಗೆ ನೀಡುತ್ತಿರುವ ಅನ್ನ ಕಿತ್ತು ತಿನ್ನುವ ಹಕ್ಕು ಯಾರಿಗೂ ಇಲ್ಲ ಎಂಬುದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದವರು ಅರಿತುಕೊಳ್ಳಬೇಕಿದೆ.
ಹೀಗಾಗಿ ಈ ಬಗ್ಗೆ ತಕ್ಷಣ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರನ್ನು ಸಂಪರ್ಕಿಸಿ ವಸ್ತುಸ್ಥಿತಿಯ ಗಮನ ಸೆಳೆಯಲು ಯತ್ನಿಸಲಾಯಿತು.
ಅವರು ಸಂಪೂರ್ಣವಾಗಿ ಅಹವಾಲು ಆಲಿಸಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ವಿಚಾರಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.