ಕೊಡಗು(ಭಾಗಮಂಡಲ) prajakiran.com : ದಕ್ಷಿಣ ಭಾರತದ ಪುಣ್ಯಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ ಕಾವೇರಿಯ ಉಗಮ ಸ್ಥಾನ ಶ್ರೀ ಕ್ಷೇತ್ರ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಬೆಳ್ಳಂಬೆಳಗೆ ದುರಂತ ಸಂಭವಿಸಿದೆ.
ಕರೊನಾ ಹಿನ್ನಲೆಯಲ್ಲಿ ಪುಣ್ಯ ಸ್ನಾನಕ್ಕೆ ನಿರ್ಭಂದದ ನಡುವೆಯೂ ವರ್ಷದ ಪೂಜೆ ನಡೆಸಲು ನೀರಿಗೆ ಇಳಿದ ಕುಟುಂಬದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು ಜಿಲ್ಲೆಯ ಹುಣಸೂರಿನಿಂದ ಆಗಮಿಸಿದ್ದ ಕುಟುಂಬ, ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಮಣಿಕಂಠ ,ಯಶೋಧ,ಪ್ರಮಿಳಾ ನೀರಿನಲ್ಲಿ ಮುಳುಗುತ್ತಿದ್ದರು.
ಇದನ್ನು ಗಮನಿಸಿದ ಮತ್ತೊಬ್ಬ ಸದಸ್ಯ ಸುಬ್ರಮಣಿ (34) ಮಣಿಕಂಠರನ್ನು ಮೇಲೆತ್ತಲು ಹೋಗಿ ತಾನೇ ನೀರು ಪಾಲಾಗಿದಾನೆ.
ಉಳಿದಂತೆ ಪ್ರಮಿಳಾ ಮತ್ತು ಯಶೋಧ ನೀರಿನಿಂದ ಮೇಲೆ ಎತ್ತಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿದೆ.
ಈ ನಡುವೆ ಸಂಗಮದಲ್ಲಿ ನೀರು ಹೆಚ್ಚಾಗಿದ್ದರೂ ದೇವಸ್ಥಾನ ಸಮಿತಿ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಘಟನೆ ಸಂಬಂಧ ಭಾಗಮಂಡಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.