ಬೆಳಗಾವಿ prajakiran.com : ಬೆಳಗಾವಿಯ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿ ಎಸ್ ಟಿ ) ಕಮಿಷನರೇಟ್ ಕಚೇರಿಯ ಮೇಲೆ ಬುಧವಾರ ಸಿಬಿಐ ಅಧಿಕಾರಿಗಳ ತಂಡ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಕೇಂದ್ರ ಅಬಕಾರಿ ಮತ್ತು ತೆರಿಗೆ ಕಚೇರಿ ಇನ್ಸಪೆಕ್ಟರ್ ವೈಭವ ಗೋಯಲ್, ಸುಪರಿಟೆಂಡೆಂಟ್ ಸುರೇಶ ಜಡಿಗಿ, ಡೆಪ್ಯೂಟಿ ಸುಪರಿಟೆಂಡೆಂಟ್ ಮೋಹನ್ ಕುಮಾರ್ ಅವರು ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಇವರು ಆರ್ ಎನ್ ಪಾನ್ ಮಸಾಲ ಕಂಪನಿ ಮಾಲೀಕ ರಾಜ ಲಕ್ಷ್ಮಣ ಬಳಿ 20 ಲಕ್ಷ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಈ ಕುರಿತು ಮಾಲೀಕ ರಾಜಲಕ್ಷ್ಮಣ ಅವರು ಬೆಂಗಳೂರು ಸಿಬಿಐ ಕಚೇರಿಗೆ ದೂರು ನೀಡಿದ್ದರು.
ಬುಧವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳ ತಂಡ ಭ್ರಷ್ಟಚಾರ ನಿಗ್ರಹ ದಳದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಜಿಎಸ್ ಟಿ ಇನ್ಸಪೆಕ್ಟರ್ ವೈಭವ ಗೋಯಲ್, ಸುಪರಿಟೆಂಡೆಂಟ್ ಸುರೇಶ ಜಡಿಗಿ, ಡೆಪ್ಯೂಟಿ ಸುಪರಿಟೆಂಡೆಂಟ್ ಮೋಹನ್ ಕುಮಾರ್ ಅವರು 5 ಲಕ್ಷ ಹಣ ಸ್ವೀಕರಿಸುವಾಗ ಬಂಧಿಸಿದ್ದರು.
ಬಳಿಕ ಇವರನ್ನು ಗುರುವಾರ ಧಾರವಾಡದ ಮೂರನೇ ಹೆಚ್ಚುವರಿ ವಿಶೇಷ ಸಿಬಿಐ ನ್ಯಾಯಾಲಯದ ಎದುರು ಹಾಜರು ಪಡಿಸಿದರು. ಬಂಧಿತ ಮೂವರನ್ನು ನ್ಯಾಯಾಲಯ ಸೆ. 30ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.