೧೩೨ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಬಡ್ತಿ
ಧಾರವಾಡ orajakiran.com : ಶಾಲೆಯ ಮುಖ್ಯಾಧ್ಯಾಪಕರು ನಿರಂತರ ಕ್ರಿಯಾಶೀಲ ನೆಲೆಯಲ್ಲಿ ತಮ್ಮ ನೈತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಅವರು ಗುರುವಾರ ಬೆಳಗಾವಿ ವಿಭಾಗ ಮಟ್ಟದ ಕೌನ್ಸೆಲಿಂಗ್ದಲ್ಲಿ ಸರಕಾರಿ ಪ್ರೌಢ ಶಾಲಾ ಗ್ರೇಡ್-೨ ಸಹ ಶಿಕ್ಷಕ ವೃಂದದಿಂದ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗ್ರುಪ್-ಬಿ ವೃಂದಕ್ಕೆ ಬಡ್ತಿ ಪಡೆದ ಶಿಕ್ಷಕ-ಶಿಕ್ಷಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಜೊತೆಗೆ ಶಾಲೆಯ ಆಂತರಿಕ ಮತ್ತು ಬಾಹ್ಯ ಸೌಂದರ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬೇಕು.
ಈ ಬಡ್ತಿ ಪ್ರಕ್ರಿಯೆಯ ಮೂಲಕ ಪ್ರೌಢಶಾಲಾ ಸಹ ಶಿಕ್ಷಕರಿಗೆ ಗೆಝೆಟೆಡ್ ಹುದ್ದೆ ಪ್ರಾಪ್ತವಾಗುತ್ತಿದ್ದು, ಆ ಮೂಲಕ ಸರಕಾರಿ ಪ್ರೌಢ ಶಾಲೆಗಳು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅತಿ ಹೆಚ್ಚು ಸಂಪನ್ಮೂಲಗಳನ್ನು ಹೊಂದುವಂತೆ ಮಾಡಬೇಕು.
ಉತ್ಕೃಷ್ಟ ಮಾನವ ಸಂಪನ್ಮೂಲ ಸಿದ್ಧಗೊಳ್ಳುವಲ್ಲಿ ಎಲ್ಲ ಮುಖ್ಯಾಧ್ಯಾಪಕರು ಕ್ರಿಯಾಪ್ರೇರಕರಾದರೆ ಸರಕಾರಿ ಪ್ರೌಢಶಾಲೆಗಳು ಸಂಪನ್ಮೂಲ ಕೇಂದ್ರಗಳಾಗಬೇಕು ಎಂದರು.
ಗುರುವಾರ ಕೌನ್ಸೆಲಿಂಗ್ಗೆ ಹಾಜರಾದ ೧೩೨ ಶಿಕ್ಷಕರ ಪೈಕಿ ಒಟ್ಟು ೮೬ ಜನರು ಸರ್ಕಾರಿ ಪ್ರೌ.ಶಾ. ಮುಖ್ಯ ಶಿಕ್ಷಕ ಹುದ್ದೆಯ ಬಡತಿ ಆದೇಶಗಳನ್ನು ಪಡೆದುಕೊಂಡರು.
ಹೆಚ್ಚುವರಿ ಯಾದಿಯಲ್ಲಿರುವ ಅರ್ಹ ಶಿಕ್ಷಕ-ಶಿಕ್ಷಕಿಯರ ಬಡತಿ ಕೌನ್ಸೆಲಿಂಗ್ ಆಗಷ್ಟ ೨೧ ರಂದು (ಶುಕ್ರವಾರ) ಮುಂಜಾನೆ ೧೧ ಗಂಟೆಗೆ ನಡೆಯಲಿದೆ ಎಂದರು.
ಪ್ರಭಾರಿ ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್.ಎಸ್. ಮುಳ್ಳೂರ ಮಾತನಾಡಿ, ತಮಗೆ ಲಭಿಸಿದ ಪತ್ರಾಂಕಿತ ಹುದ್ದೆಯ ಅಧಿಕಾರವನ್ನು ನಿಯಮಾನುಸಾರ ಬಳಕೆ ಮಾಡಿಕೊಳ್ಳಬೇಕು.
ಸರಕಾರದ ಧ್ಯೇಯ-ಧೋರಣೆಗೆಳಿಗೆ ವ್ಯತಿರಿಕ್ತವಾಗಿ ಯಾವುದೂ ನಡೆಯದಂತೆ ಆಡಳಿತದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಹಿರಿಯ ಸಹಾಯಕ ನಿರ್ದೇಶಕ ಕೇಶವ ಪೆಟ್ಲೂರ, ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರ, ಇ-ಆಡಳಿತ ನಿರ್ವಹಣಾಧಿಕಾರಿ ಶಾಂತಾ ಮೀಸಿ, ಕಿರಿಯ ಸಂಶೋಧನಾಧಿಕಾರಿ ಮಹಾದೇವಿ ಮಾಡಲಗೇರಿ, ಸಹಾಯಕ ನಿರ್ದೇಶಕ ಜೆ. ಪ್ರಕಾಶ, ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಅಧೀಕ್ಷಕ ರಮೇಶ ದಂಡಿಗೆದಾಸರ, ವಿನಯಾ ಗೊಜನೂರ, ಸಾವಿತ್ರಿ ಪಟ್ಟಣಶೆಟ್ಟಿ, ಲಕ್ಷ್ಮಣ ಪಾಟೀಲ, ಪ್ರಮೋದಿನಿದೇವಿ, ಮಂಜುನಾಥ ಕಲಾದಗಿ, ಐ.ಬಿ. ಹರಕುಣಿ ಇದ್ದರು.