ಧಾರವಾಡ prajakiran.com : ಜಿಲ್ಲೆಯ ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ (63) ಭಾನುವಾರ ವಿಧಿವಶರಾದರು.
ಅವರನ್ನು ರಕ್ತದ ಒತ್ತಡದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಬೆಳಗಿನಜಾವ ಇಹಲೋಕವನ್ನು ತ್ಯಜಿಸಿದರು.
ಅವರ ಅಗಲಿಕೆ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಅವರನ್ನು ಬಹುತೇಕ ಜನರು ಪ್ರೀತಿಯಿಂದ ಮಾವಾ ಎಂದು ಸಂಭೋದಿಸುತ್ತಿದ್ದರು.
ಜನಪದರ ಯಾವುದೇ ವಿಷಯದ ಕುರಿತು ಹಾಡು ಹಾಡಿ ಎಲ್ಲರ ಮನ ಪುಳಕಗೊಳಿಸುತ್ತಿದ್ದರು.
ಅವರ ಹತ್ತು ಹಲವು ಜಾನಪದ ಕಾರ್ಯಕ್ರಮಗಳು ದೇಶವಿದೇಶದಲ್ಲಿ ಗಮನ ಸೆಳೆದಿದ್ದವು.
ಅವರಿಗೆ ಪ್ರೀತಿಯ ಮಡದಿ
ಚಿಕ್ಕಿ@ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಸದಾಕಾಲವೂ ಬೆನ್ನುಲುಬಾಗಿ ನಿಂತು ಸಾಥ್ ನೀಡಿದ್ದರು.
ಈ ಜೋಡಿ ಉತ್ತರಕರ್ನಾಟಕ ಭಾಗದ ಜನಪದ ಶೈಲಿಯ ಕಲೆಯನ್ನು ಉಳಿಸಿಬೆಳೆಸಲು ಸಾಕಷ್ಟು ಶ್ರಮವಹಿಸಿದೆ.
ಅದಕ್ಕಾಗಿ ಜನಪದ ಸಂಶೋಧನಾ ಕೇಂದ್ರ ಹುಟ್ಟುಹಾಕಿ ಮಹಿಳಾ ಸಂಕ್ರಾಂತಿ, ಜೋಗುಳ, ಸೋಬಾನ, ಬೀಸುವ ಕಲ್ಲಿನ ಪದ, ರಂಗಗೀತೆ, ಗೀಗೀ ಪದ, ಹೀಗೆ ಹತ್ತು ಹಲವು ಬಗೆಯ ರಸದೌತಣ ಉಣಬಡಿಸಿ ಮುಂದಿನ ಪಿಳಿಗೆಗೆ ಅದನ್ನು ಪರಿಚಯಿಸಿದ ಹಿರಿಮೆ ಹೊಂದಿದೆ.
ಅಂತಹ ಹಿರಿಯ ಕೊಂಡಿಯೊಂದು ಕಳಚಿರುವುದು ಜಾನಪದ ಲೋಕಕ್ಕೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನಕ್ಕೆ ನೋವುಂಟು ಮಾಡಿದೆ.