ಧಾರವಾಡ prajakiran.com : ಭಾರತೀಯ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿರುವ ಆಗಸ್ಟ್ 9 ರ ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧಾರವಾಡ ಜಿಲ್ಲೆಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಿಸುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ.
ಆ ಮೂಲಕ ದೇಶ ಹಾಗೂ ರಾಜ್ಯದ ಜನತೆಗೆ ಕ್ವಿಟ್ ಇಂಡಿಯಾ ಚಳುವಳಿಯ ವಿಶೇಷತೆಯನ್ನು ನೆನಪಿಸಿ ಗಮನ ಸೆಳೆದಿದ್ದಾರೆ.
ಈ ಕುರಿತು ತಮ್ಮ ಕಚೇರಿಯಿಂದ ಶಾಲು, ಹಾರ ಮತ್ತು ಸಂದೇಶಪತ್ರಗಳನ್ನು ಅವರಿಗೆ ತಲುಪಿಸಿ ಗೌರವಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿದ್ದರು.
ರಾಷ್ಟ್ರಪತಿಗಳ ಸಂದೇಶದೊಂದಿಗೆ ಜಿಲ್ಲಾಧಿಕಾರಿಗಳ ಪ್ರತಿನಿಧಿಯಾಗಿ ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ ಜುಬೇರ ಅವರು ಭಾನುವಾರ ಹುಬ್ಬಳ್ಳಿಯ
ಉಣಕಲ್ ಗ್ರಾಮದ ಟೀಚರ್ಸ್ ಕಾಲೋನಿಯಲ್ಲಿರುವ ಸ್ವಾತಂತ್ರ್ಯ ಯೋಧ ಶ್ರೀರಾಮ ವಿಷ್ಣುಕಾಂತ ತೆಂಬೆ (99) ಮತ್ತು ಧಾರವಾಡ ತಾಲೂಕಿನ ಮೊರಬ ಗ್ರಾಮದ ನೂರ್ ಅಹ್ಮದ ನದಾಫ್ ಅವರನ್ನು ಭೇಟಿಯಾಗಿ ಸಂದೇಶ ತಲುಪಿಸಿದರು.
ಅಲ್ಲದೆ, ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವ ಅಂಗವಾಗಿ ಭಾರತ ಸರಕಾರ, ರಾಷ್ಟ್ರಪತಿಭವನದಿಂದ ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಮಾಡಲು ನೀಡಿದಂತಹ ಅಂಗವಸ್ತ್ರ, ಶಾಲು ಹಾಗೂ ಅಭಿನಂದನಾಪತ್ರಗಳನ್ನು ನೀಡಿ, ರಾಷ್ಟ್ರಪತಿಗಳ ಪರವಾಗಿ ಸನ್ಮಾನಿಸಿ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಷ್ಣುಕಾಂತ ತೆಂಬೆ ಅವರ ಧರ್ಮಪತ್ನಿ, ಮಕ್ಕಳು ಹಾಗೂ ನೂರ್ ಅಹ್ಮದ ನದಾಫ ಅವರ ಮಗಳು ಸೇರಿದಂತೆ ಅವರ ಕುಟುಂಬ ಸದಸ್ಯರು, ಕಂದಾಯ ಇಲಾಖೆ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಈ ಅಪರೂಪದ ಸರಳ ಸಮಾರಂಭಕ್ಕೆ ಸಾಕ್ಷಿಯಾದರು.