ಬೆಂಗಳೂರು prajakiran.com :ರಾಜ್ಯ ರಾಜಕೀಯದಲ್ಕಿ ನಾಯಕತ್ವ ಬದಲಾವಣೆ ಚರ್ಚೆಗಳಿಗೆಲ್ಲಾ ಅಂತ್ಯ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಮಧ್ಯಾಹ್ನ 3.30ಕ್ಕೆ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಸಭೆ ನಡೆಸಲಿದ್ದಾರೆ.
ನಾಳೆ ಸಚಿವರು ಹಾಗೂ ಶಾಸಕರಿಂದ ವೈಯಕ್ತಿಕ ಅಭಿಪ್ರಾಯ ಆಲಿಸಲಿದ್ದಾರೆ ಎನ್ನಲಾಗಿದೆ. ಅವರ ಈ ಆಗಮನ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಸಿ.ಪಿ.ಯೋಗೇಶ್ವರ್ ಅವರ ದೆಹಲಿ ಭೇಟಿ, ಮಧ್ಯೆ ಸಿಎಂ ಯಡಿಯೂರಪ್ಪ ಅವರೂ ‘ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ದ’ ಎಂದಿದ್ದರು. ಇದಾದ ಕೆಲವೇ ದಿನಗಳ ಬಳಿಕ ‘ಇನ್ನೂ ಎರಡು ವರ್ಷ ನಾನೇ ಸಿಎಂ’ ಎಂದಿದ್ದರು.
ಬಸನಗೌಡ ಪಾಟೀಲ್, ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗಳು, ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರ ದೆಹಲಿ ಭೇಟಿ ಮತ್ತು ಆರ್ ಎಸ್ ಎಸ್ ನಾಯಕ ಭೇಟಿ, ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರ ‘ಮಾತನಾಡಲು ವೇದಿಕೆ ಬೇಕು’ ಎಂಬ ಹೇಳಿಕೆ ಮುಂತಾದ ಬೆಳವಣಿಗೆಗಳು ಇಂದಿನ ಅರುಣ್ ಸಿಂಗ್ ಭೇಟಿಯಲ್ಲಿ ವರದಿಯಾಗಲಿವೆ.