ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ನವನಗರದ ಬಿ.ಆರ್ ಟಿಎಸ್ ಬಸ್ ನಿಲ್ದಾಣ ಎದುರು ಭಾನುವಾರ ಬಿಆರ್ ಟಿಎಸ್ ಯೋಜನಾ ವ್ಯಾಪ್ತಿಯಲ್ಲಿ ಸಸಿ ನೆಡುವ ಹಾಗೂ ಅವಳಿನಗರದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಮ್ ಆದ್ಮಿ ಪಕ್ಷದ ವತಿಯಿಂದ ಸಸ್ಯಾಗ್ರಹ ಚಳುವಳಿ ನಡೆಯಿತು.
‘ಬಿ.ಆರ್.ಟಿ.ಎಸ್. ಸಸ್ಯಾಗ್ರಹ ಚಳುವಳಿ’ ಗೆ ಅವಳಿ ನಗರದ ಪರಿಸರ ತಜ್ಞರು, ಸಂಘ ಸಂಸ್ಥೆಗಳ ಸದಸ್ಯರು ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ಚಳುವಳಿಗೆ ಮಹಾನಗರದ ಅನೇಕ ಜನ ಬೆಂಬಲ ಸೂಚಿಸಿದ್ದಾರೆ. ಅನೇಕರು ಬೇಕಾದ ಎಲ್ಲ ಸಸಿಗಳು ನೀಡುವುದಾಗಿ ಮತ್ತು ನೆಟ್ಟ ಗಿಡಗಳ ಪೋಷಣೆಯ ಜವಾಬ್ದಾರಿ ವಹಿಸುವುದಾಗಿ ಆಶ್ವಾಸನೆ ನೀಡಿದರು.
ಅಭಿಯಾನದ ಅಂಗವಾಗಿ ನಿರತ ಸೇವಾ ಸಂಸ್ಥೆಯ ಅಸ್ಲಮ್ ಜಹಾನ್ ಅಬ್ಬಿಹಾಳ್ ೫೦ ಸಸಿ ನೆಟ್ಟು ಬೆಳೆಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಪರಿಸರ ತಜ್ಞ ಡಾ. ಮಹಾಂತೇಶ ತಪಶೆಟ್ಟಿ, ಸರ್ಕಾರ ಮತ್ತು ಜನ ಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಮರೆತಾಗಲೆಲ್ಲಾ ಜನರು ಸ್ವತಃ ಎಚೆತ್ತುಕೊಂಡು ಬುದ್ದಿ ಕಲಿಸಿದ್ದು ಉಂಟು.
ಆದ್ದರಿಂದ ನಮ್ಮನ್ನು ಪ್ರತಿನಿಧಿಸುವವರು ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಅವಳಿನಗರದ ಮಧ್ಯೆ ವೇಗವಾಗಿ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ನಗರ ಸಾರಿಗೆ ಯೋಜನೆ ಅಡಿಯಲ್ಲಿಯೇ ಸುಮಾರು 1200 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಆರ್ ಟಿ ಎಸ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಈ ಕಾಮಗಾರಿಗಾಗಿ ಸಾವಿರಾರು ಮರಗಳ ಮಾರಣಹೋಮ ಮಾಡಿರುವುದು ಖಂಡನೀಯ. ಇನ್ನೂ ಕೇಂದ್ರ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡುವಾಗಲೇ ಹತ್ತು ಮೀಟರ್ ಗೆ ಒಂದರಂತೆ ಸಸಿ ನೆಡಲು ಆದೇಶ ನೀಡಿದೆ.
ಆದರೂ ಸಹಿತ ಅಧಿಕಾರಿಗಳು ಮಾತ್ರ ಸಸಿ ನೆಡದೇ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಪರಿಸರ ಇದ್ದರೆ ಮನುಷ್ಯ.
ವಿಶ್ವದ ಅತ್ಯುತ್ತಮ ನಗರಗಳ ಆರೋಗ್ಯಕರ ಅಭಿವೃದ್ಧಿ ಮತ್ತು ಸಮೃದ್ಧಿಗೆ ಕಾರಣ ಅಲ್ಲಿನ ಸರ್ಕಾರಗಳು ಸುಸ್ಥಿರತೆಯನ್ನು ಅಭಿವೃದ್ಧಿಯ ಮೂಲ ತತ್ವವಾಗಿ ಅಳವಡಿಸಿಕೊಂಡಿರುವುದು.
ಈ ಹಿನ್ನೆಲೆಯಲ್ಲಿ ಮಾರಣಹೋಮವಾದ ಮರಗಳ ಮರುಹುಟ್ಟಿಗೆ ಆಮ್ ಆದ್ಮಿ ಪಕ್ಷ ಸಂಕಲ್ಪ ಮಾಡಿದ್ದು, ಅದಕ್ಕಾಗಿ ಸಸ್ಯಾಗ್ರಹ ಜನಾಂದೋಲನಕ್ಕೆ ಮುಂದಾಗಿದೆ ಸಸ್ಯಾಗ್ರಹ ಚಳುವಳಿ ಕೇವಲ ಪಕ್ಷಕ್ಕೆ ಸೀಮಿತವಲ್ಲ ಎಂದರು.
ಪರಿಸರ ಪ್ರೇಮಿಗಳಾದ ಪ್ರಕಾಶ್ ಗೌಡರ, ಪವನ್ ಮಿಸ್ಕಿನ್, ಧೀರಜ ಕೆ. ವಿ., ಎಎಪಿ ಯ ಧಾರವಾಡ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಪಕ್ಷದ ಮುಖಂಡ ವಿಕಾಸ ಸೊಪ್ಪಿನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.