ಧಾರವಾಡ prajakiran.com : ಕಳೆದ ಹದಿನೇಳು ದಿನಗಳಿಂದ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರನ್ನು ಖಂಡಿಸಿ ವಕೀಲರು ಸೈಕಲ್ ಏರಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಬೆಲೆ ಏರಿಕೆ ಖಂಡಿಸಿ ಹೈಕೋರ್ಟ್ ವಕೀಲರು ಆಗಿರುವ ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಅವರ ನೇತೃತ್ವದಲ್ಲಿ ಬುಧವಾರ ಈ ವಿನೂತನ ಪ್ರತಿಭಟನೆ ನಡೆಯಿತು.
ಕಳೆದ ಏಳು ವರ್ಷಗಳ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸರಾಸರಿ ಸುಮಾರು ಪ್ರತಿ ಬ್ಯಾರಲ್ಗೆ ೩೫ರಿಂದ೩೭ ಡಾಲರ್ ಇದೆ.
ಪರಿಸ್ಥಿತಿ ಹೀಗಿದ್ದಾಗಲೂ ನಮ್ಮ ದೇಶದಲ್ಲಿ ತೈಲ ಬೆಲೆಯನ್ನು ಸತತ ಹದಿನೇಳು ದಿನಗಳಿಂದ ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ. ಕೋವಿಡ್ ಭಯವನ್ನು ಬಂಡವಾಳವನ್ನಾಗಿಸಿಕೊಂಡಿದೆ.
ಸಾರಿಗೆ ಮತ್ತು ಸರಕು ಕ್ಷೇತ್ರದ ಮೇಲೆ ಇದರಿಂದ ದೊಡ್ಡ ಪ್ರಮಾಣದ ಪರಿಣಾಮ ಬೀರಲಿದೆ. ಅವಶ್ಯಕ ವಸ್ತುಗಳ ಧಾರಣಿ ಹೆಚ್ಚಳಗೊಂಡು ಪರೋಕ್ಷವಾಗಿ ಜನಸಾಮಾನ್ಯರಿಗೆ ಭಾರಿ ಹೊರೆಯಾಗಲಿದೆ. ಅಲ್ಲದೇ ಅತ್ಯಂತ ಕೆಳಮಟ್ಟದಲ್ಲಿನ ದ್ವಿಚಕ್ರವಾಹನ ಸವಾರರಿಗೆ ತೀವ್ರವಾದ ತೊಂದರೆ ಆಗಲಿದೆ.
ದೇಶದ ಜನರ ಹಿತದೃಷ್ಠಿಯಿಂದ ರಾಷ್ಟ್ರಪ್ರತಿಗಳು ಮಧ್ಯೆ ಪ್ರವೇಶಿಸಿ ವಾಸ್ತವ ಬೆಲೆ ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಕಿಲ್ಲಾದಲ್ಲಿನ ಜ್ಯೋತಿ ತಾಲೀಮಿನಿಂದ ಆರಂಭವಾದ ಜಾಥಾದಲ್ಲಿ ಮಂಜುನಾಥ ಭೋವಿ, ಎಸ್.ಎ.ಪವಾರ, ರವಿ ಗೌಳಿ, ವಿಲ್ಸನ್ ಫರ್ನಾಂಡಿಸ್, ಗೊನ್ಸಾಲವಿಸ್, ಎನ್.ಬಿ.ನಾಗರಾಜ, ರೆಹಮಾನ ಹೊಳಿ, ರಾಜು ಖೋತ, ಕಾಂಗ್ರೆಸ್ ಮುಖಂಡರಾದ ಯಾಸೀನ್ ಹಾವೇರಿಪೇಟ್, ಕಾಂಗ್ರೆಸ್ ಮುಖಂಡರಾದ ನಾಗರಾಜ ಗುರಿಕಾರ, ಶ್ರೀಧರ ಶೇಟ್ ಇನ್ನಿತರರು ಭಾಗವಹಿಸಿದ್ದರು.