ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ
ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಹೊರವಲಯದ ರಿಂಗ್ ರೋಡ್ನಲ್ಲಿರುವ ಮಂಟೂರ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ರಫೀಕ್ ನದಾಫ್ ಸಾವನ್ನಪ್ಪಿದ ನತದೃಷ್ಟನಾಗಿದ್ದಾನೆ.
ಇದೇ ವೇಳೆ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ ದೊಡ್ಡಮನಿ ಹಾಗೂ ಇಲಾಖೆಯ ಇನ್ಸಪೆಕ್ಟರ್ ಈಶ್ವರ ಸುಧೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರತಿನಿತ್ಯದಂತೆ ಇಂದು ಲಾರಿಯೊಂದರ ಪತ್ರಗಳನ್ನ ನೋಡಲು ವಾಹನ ನಿಲ್ಲಿಸಲಾಗಿತ್ತು.
ಮುಂದೆ ನಿಂತಿದ್ದ ಲಾರಿ ಚಾಲಕನ ಬಳಿ ಪತ್ರಗಳನ್ನ ಪಡೆಯಲು ಇಲಾಖೆಯ ಚಾಲಕ, ಅಮರಗೋಳದ ನಿವಾಸಿ ಮಹ್ಮದ ರಫೀಕ ಅಬ್ದುಲ್ ಸಾಹೇಬ್ ನದಾಫ (೩೪) ಕೆಳಗಿಳಿದು ನಿಂತಿದ್ದಾರೆ.
ಅದೇ ಸಮಯದಲ್ಲಿ ಲಾರಿಯೊಂದು ಬಂದು ಡಿಕ್ಕಿ ಹೊಡೆದು ಮುಂದಿನ ಲಾರಿಗೂ ಗುದ್ದಿದೆ.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಚಾರ ಡಿಸಿಪಿ ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೆದಾರ ಭೇಟಿ ನೀಡಿ ಪರಿಶೀಲಿಸಿದರು.
ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ಹುಬ್ಬಳ್ಳಿಯ ಅಮರಗೋಳದಲ್ಲಿರುವ ರಫೀಕ ನದಾಫ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಹಲವು ವರ್ಷಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ರಫೀಕ್ ಎಲ್ಲಾ ಅಧಿಕಾರಿ ವರ್ಗದ ಜೊತೆಗೆ ಹಾಗೂ ವಿಶೇಷವಾಗಿ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ.
ಆದರೆ, ಜವರಾಯನ ಅಟ್ಟಹಾಸಕ್ಕೆ ರಫೀಕ ಇಹಲೋಕ ತ್ಯಜಿಸಿದ್ದು, ಪಾಲಕರಿಗೆ ಒಬ್ಬನೇ ಮಗನಾಗಿದ್ದ ರಫೀಕ್ ಇಬ್ಬರು ಪುತ್ರರನ್ನ ಹೊಂದಿದ್ದ. ಅವರ ಐದಾರು ವಯಸ್ಸಿನ ಮಕ್ಕಳನ್ನ ನೋಡಿ ಅಮರಗೋಳ ಗ್ರಾಮಸ್ಥರ ಜೀವ ಮಮ್ಮಲ ಮರುಗುವಂತಾಗಿದೆ.