ಮಂಜುನಾಥ ಕವಳಿ
ಧಾರವಾಡ prajakiran.com :
ಧಾರವಾಡ ಗ್ರಾಮೀಣ ಜನರ ಅಳಲು ಹೇಳಾಗದ ಸ್ಥಿತಿ ತಲುಪಿ ಬಿಟ್ಟಿದೆ.
ಬಿಜೆಪಿಯ ಅಭಿವೃದ್ಧಿ ಮಂತ್ರ, ಸಾಧನೆ ಪಟ್ಟಿ ಕೆಲವರಿಗೆ ಮಾತ್ರ ಸೀಮಿತವಾಗಿದೆ.
ಧಾರವಾಡ ಗ್ರಾಮೀಣ ಭಾಗದ ಹಲವು ಗ್ರಾಮದ ರಸ್ತೆ ಹದಗೆಟ್ಟು ಎಷ್ಟೋ ಜನ ಪರದಾಟ ನಡೆಸಿ, ವರ್ಷಗಟ್ಟಲೆ ಅವರ ಮನೆಗೆ ಅಲೆದಾಡಿದರೂ ಕ್ಯಾರೆ ಎನ್ನದ ಶಾಸಕರ ವಿರುದ್ದ ಗ್ರಾಮಸ್ಥರ ಗರಂ ಆಗಿದ್ದಾರೆ.
ಅದರಲ್ಲೂ
ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಗ್ರಾಮದ ಜನರು ಧಾರವಾಡ ಗ್ರಾಮೀಣ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಸ್ತೆ ಸುಧಾರಣೆಗೆ ಶಾಸಕರು ಅದು ಎಷ್ಟೋ ಬಾರಿ ಭೂಮಿ ಪೂಜೆ ಮಾಡಿ ಇತ್ತಕಡೆ ಗಮನ ಹರಿಸಿಲ್ಲ ಎಂಬುವುದು ಗ್ರಾಮದ ಜನರ ಆರೋಪವಾಗಿದೆ.
ಈ ರಸ್ತೆಯಲ್ಲಿ ಮಾರುದ್ದ ತಗ್ಗು ಗುಂಡಿಗಳು ಪ್ರಯಾಣಿಕರ ಹಾಗೂ ಗ್ರಾಮೀಣ ಜನರ ಬಲಿಗಾಗಿ ಕಾಯ್ದು ಕುಳಿತಿವೆ. ಇದೆನಾ ಶಾಸಕರ ಅಭಿವೃದ್ಧಿ ಮಂತ್ರ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಹಲವಾರು ಬಾರಿ ಶಾಸಕರ ಗಮನಕ್ಕೆ ಸಮಸ್ಯೆ ಕುರಿತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲದೇ ಹೋರಾಟವನ್ನು ಸಹ ಮಾಡಲಾಗಿದೆ.
ಆದರೆ ಶಾಸಕರಿಗೆ ಈ ಕಡೆ ಚಿಂತೆಯಿಲ್ಲ ಎಂಬಂತೆ ಆರಾಮಾಗಿ ಯಾಕೆ ಬರಿ ಪ್ರಚಾರಕ್ಕಾಗಿ ಭೂಮಿ ಪೂಜೆ ಮಾಡುತ್ತಾ ಸಾಗುತ್ತಿದ್ದಾರೆ ಎಂದು ಕವಲಗೇರಿ ಗ್ರಾಮದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರೇ ಆದಷ್ಟು ಬೇಗ ಇನ್ನಾದರೂ ರಸ್ತೆ ಸುಧಾರಣೆ ಮುಂದಾಗಿ ಎಂದು ಆಗ್ರಹಿಸಿದ್ದಾರೆ.
ಅಚ್ಚರಿ ಸಂಗತಿಯೆಂದರೆ ಈ ರಸ್ತೆ ಕಾಮಗಾರಿ ಟೆಂಡರ್ ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಅದಕ್ಕೆ ಕಾರಣ ಹುಡುಕಿದಾಗ ತಮಗೆ ಬೇಕಾದ ಗುತ್ತಿಗೆದಾರನಿಗೆ ಟೆಂಡರ್ ಆಗಿಲ್ಲ ಎಂಬುದು ಗೊತ್ತಾಗಿದೆ.
ಧಾರವಾಡ ಗ್ರಾಮೀಣ ಶಾಸಕರ ಬಹುತೇಕ ಕಾಮಗಾರಿಗಳ ಟೆಂಡರ್ ತಮಗೆ ಬೇಕಾದವರಿಗೆ ಆಗಿವೆ ಎಂಬ ಆರೋಪಗಳಿವೆ.
ಯಾರಾದರೂ ಕಾಮಗಾರಿ ಬಯಸಿ ಟೆಂಡರ್ ಅರ್ಜಿ ಹಾಕಿದರೆ ಅವರಿಗೆ ಆಪ್ತರು ಕರೆ ಮಾಡಿ ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಾರೆ.
ಹಿಂದೆ ಸರಿಯದಿದ್ದರೆ ಅವರ ಬಿಲ್ ಪೆಂಡಿಂಗ ಹಾಕುಸುತ್ತಾರೆ. ಶಾಸಕರ ಆಪ್ತರು ಮಾಡಿದ ಬಹುತೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಗುತ್ತಿಗೆದಾರರು ಬಹಿರಂಗವಾಗಿ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ.
ಅಲ್ಲದೆ ಈ ಬಗ್ಗೆ ಹಲವು ದೂರುಗಳು ಕೂಡ ಶಾಸಕರ ಗಮನಕ್ಕೆ ತರಲಾಗಿದೆ. ಆದರೂ ಅವರು ಕ್ಯಾರೆ ಎನ್ನದೆ ಮೌನಂ ಸಮ್ಮತಿ ಲಕ್ಷಣಂ ಎಂಬಂತಾಗಿದೆ ಎಂದು ಶಾಸಕರ ಬೆಂಬಲಿಗರೆ ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗಲಾದರೂ ಶಾಸಕರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಜನರೆ ತಿರುಗಿಬೀಳಲಿದ್ದಾರೆ ಎಂಬುದನ್ನು ಅವರು ಮರೆಯಬಾರದು.