ಬೆಂಗಳೂರು prajakiran.com : ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್ ಒಳಗೊಂಡಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳು ಜೂನ್ 1 ರಿಂದ ಸೀಮಿತವಾದ ಕಾರ್ಯನಿರ್ವಹಣೆ ಮಾಡಲಿವೆ ಎಂದು ಕರ್ನಾಟಕ ಹೈಕೋರ್ಟ್ ನಿರ್ಧಾರ ಕೈಗೊಂಡಿದೆ.
ಜೂನ್ 1 ರಂದು ಪುನರಾರಂಭಗೊಳ್ಳುವ ನ್ಯಾಯಾಲಯಗಳ ಕಾರ್ಯನಿರ್ವಹಣಾ ವಿಧಾನಗಳ ಮಾನದಂಡಗಳ (Standard Operating Procedure) ಕುರಿತು ವಿಸ್ತೃತ ಮಾಹಿತಿಯನ್ನು ಕರ್ನಾಟಕ ಹೈಕೋರ್ಟಿನ ಅಧಿಕೃತ ವೆಬ್ ಸೈಟ್ ನಲ್ಲಿ ಹಾಗೂ ರಾಜ್ಯಾದ್ಯಂತ ಇರುವ ಸಂಬಂಧಪಟ್ಟ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ವೆಬ್ ಸೈಟ್ ನಲ್ಲಿ ಮೇ 26 ರ೦ದು ಪ್ರಕಟಿಸಲಾಗುವುದು.
ಮೇ 27 ರಂದು ಸಾಯಂಕಾಲ 5.00 ಗಂಟೆಗೆ ಸರಿಯಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಅಭಯ ಶ್ರೀನಿವಾಸ್ ಓಕ್ ಹಾಗೂ ಹಿರಿಯ ನ್ಯಾಯಮೂರ್ತಿಗಳು ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಹಾಗೂ ರಾಜ್ಯ ವಕೀಲರ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ವೆಬ್ ಮೀಟಿಂಗ್ ಏರ್ಪಡಿಸಿ ವಕೀಲ ಸಮುದಾಯದ ಸಹಕಾರ ಕೋರಲಿದ್ದಾರೆ.
ನ್ಯಾಯಾಲಯಗಳ ಕಾರ್ಯನಿರ್ವಹಣಾ ವಿಧಾನಗಳ ಮಾನದಂಡಗಳ (Standard Operating Procedure) ಕುರಿತು ಯಾವುದೇ ಪ್ರಶ್ನೆಗಳು ಇದ್ದಲ್ಲಿ ಸದರಿ ಪ್ರಶ್ನೆಗಳನ್ನು ವಕೀಲರ ಸಂಘದವರು ಹೈಕೋರ್ಟಿನ ಮಹಾ ವಿಲೇಖನಾಧಿಕಾರಿ (Registrar General) ಯವರಿಗೆ ಸಂಬಂಧಪಟ್ಟ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು/ ಪ್ರಧಾನ ನ್ಯಾಯಾಧೀಶರು ಇವರ ಮುಖಾಂತರ ಮೇ 27 ರಂದು ಪೂರ್ವಾಹ್ನ 11 ಗಂಟೆಯೊಳಗೆ ತಲುಪುವಂತೆ ಕಳುಹಿಸಿಕೊಡಲು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಹೈಕೋರ್ಟಿನ ಮಹಾ ವಿಲೇಖನಾಧಿಕಾರಿ ರಾಜೇಂದ್ರ ಬಾದಾಮಿಕರ್ ಅವರು ಸೂಚನಾ ಪತ್ರ ಹೊರಡಿಸಿದ್ದಾರೆ.