ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೂರು ವರ್ಷದ ಕಾನೂನು ಪದವಿ ಸ್ಥಗಿತಗೊಳಿಸಿರುವುದು ಡಿಸಿಎಂ ಅಶ್ವತ್ಥ ನಾರಾಯಣ ಅವರ ಗಮನಕ್ಕೆ ಬರಲಿಲ್ವೇ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ ಕಿಡಿಕಾರಿದರು.
ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ನಂತರ ಕಾಲೇಜಿನ ಡೀನ್ ಅವರೊಂದಿಗೂ ನೀರಲಕೇರಿ ಮಾತುಕತೆ ನಡೆಸಿದರು. ಈ ವೇಳೆ ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಕೋರ್ಸ ಬಂದ್ ಮಾಡಬೇಕಾಗಿದೆ ಎಂಬ ಉತ್ತರ ಬಂದಿದೆ.
ನಂತರ ಮಾಧ್ಯಮದವರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ನೀರಲಕೇರಿ ಅವರು, ಉನ್ನತ ಶಿಕ್ಷಣ ಸಚಿವರು ಆಗಿರುವ ಡಿಸಿಎಂ ಅಶ್ವತ್ಥ ನಾರಾಯಣ ಅವರು ಮೊನ್ನೆ ತಾನೆ ಧಾರವಾಡಕ್ಕೆ ಬಂದಿದ್ದರು.
ಆಗ ಈ ಸಮಸ್ಯೆ ಅವರ ಗಮನಕ್ಕೆ ಬರಲೇ ಇಲ್ಲವೇ ಅಥವಾ ಅವರು ಕೇವಲ ಚುನಾವಣೆ ಪ್ರಚಾರ ನಡೆಸಿ ತೆರಳಿದರೆ ಎಂದು ಪ್ರಶ್ನಿಸಿದರು.
ಇದನ್ನೇ ಮುಂದಿಟ್ಟುಕೊಂಡು ವಿದ್ಯಾರ್ಥಿಗಳ ಹಿತ ಬಲಿ ಕೊಡುವುದು ಎಷ್ಟರಮಟ್ಟಿಗೆ ಸರಿ. ಇಂತಹ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಗುಡುಗಿದರು.
ಇದೇ ವೇಳೆ ಮೂರು ವರ್ಷದ ಕಾನೂನು ಪದವಿ ಪುನರಾರಂಭಿಸುವಂತೆ ಎಬಿವಿಪಿ ಸಂಘಟನೆ ಜೊತೆಗೂಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಸ್ಪಷ್ಟವಾದ ಪ್ರತಿಕ್ರಿಯೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳೂ ಎಚ್ಚರಿಕೆ ನೀಡಿದ್ದಾರೆ.