ಹುಬ್ಬಳ್ಳಿ prajakiran.com : ಪಾಕಿಸ್ತಾನದ ವಿರುದ್ದ ನಡೆದ ಎರಡು ಯುದ್ದಗಳಲ್ಲಿ ಜಯಗಳಿಸಿದ್ದ ಸುಬೇದಾರ್ ರಂಗಪ್ಪ ಎಫ್ ಕವಡಿಗಟ್ಟಿ (76) ಕರೊನಾ ಸೋಂಕಿಗೆ ಮಂಗಳವಾರ ಬಲಿಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಂಗರಗಿ ಗ್ರಾಮದ ಮೂಲದವರಾದ ಅವರು ಕಳೆದ 30 ವರ್ಷಗಳಿಂದ ಹುಬ್ಬಳ್ಳಿಯ ಲೋಕಪ್ಪನ ಹಕ್ಕಲು ನಲ್ಲಿ ನೆಲೆಸಿದ್ದರು.
ರಂಗಪ್ಪ ಅವರು ಇತ್ತೀಚಿಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಸಾವನ್ನಪ್ಲಿದ್ದಾರೆ.
ಈ ಹಿಂದೆ ಅವರ ಎರಡು ಕೋವಿಡ್ ವರದಿಗಳು ‘ನೆಗೆಟಿವ್’ ಬಂದಿದ್ದವು. ಮಂಗಳವಾರ ಬಂದ ಮೂರನೇ ವರದಿ ಮಾತ್ರ ‘ಪಾಸಿಟಿವ್’ ಆಗಿದೆ. ಕೋವಿಡ್ ನಿಯಮಾನುಸಾರ ಬುಧವಾರ ಧಾರವಾಡ ಜಿಲ್ಲಾಡಳಿತ ಅಂತ್ಯಕ್ರಿಯೆ ನೆರವೇರಿಸಿದೆ.
ಇವರು ನೆರೆಯ ಶತ್ರು ದೇಶ ಪಾಕಿಸ್ತಾನದ ವಿರುದ್ಧ ನಡೆದ ಎರಡು ಯುದ್ಧ (1965, 1971)ಗಳಲ್ಲಿ ವೀರಸೇನಾನಿಯಾಗಿ ಹೋರಾಡಿ ಭಾರತದ ಗೆಲುವಿಗೆ ಕಾರಣರಾಗಿದ್ದರು.
ಈ ಯೋಧ ಸೇನಾ ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ವಾಸವಾಗಿ ಸೇನೆಗೆ ಸೇರುವಂತೆ ಯುವಕರನ್ನು ಹುರಿದುಂಬಿಸುತ್ತಿದ್ದರು. ಅಲ್ಲದೆ, ಅವರ ಇಬ್ಬರು ಪುತ್ರರು ಸೈನಿಕರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ.