ಬೆಂಗಳೂರು prajakiran.com : ನಾಡಿನ ಹಿರಿಯ ಸಾಹಿತಿ, ವಿಮರ್ಶಕರಾಗಿದ್ದ ಡಾ. ಜಿ.ಎಸ್. ಆಮೂರ (95) ಅವರು ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ವಿಧಿವಶರಾದರು.
ಅವರು ಕಳೆದ ಹದಿನೈದು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಡಾ. ಗುರುರಾಜ ಶ್ಯಾಮಾಚಾರ ಆಮೂರರು (ಜಿ.ಎಸ್. ಆಮೂರರು) ಹಲವು ದಶಕಗಳಿಂದ ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿಗಳಾಗಿದ್ದಾರೆ.
ಇವರ “ಭುವನದ ಭಾಗ್ಯ” ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಅಧ್ಯಾಪಕರಾಗಿದ್ದಾಗಲೇ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದಿದ್ದರು.
ಮೇ 8, 1925 ರಲ್ಲಿ ಧಾರವಾಡದಲ್ಲಿ ಜನಿಸಿದ ಅವರು ಕರ್ನಾಟಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಕನ್ನಡ, ಆಂಗ್ಲ, ಸಂಸ್ಕೃತ, ಮರಾಠಿ ಭಾಷೆಯಲ್ಲಿ ಪರಿಣಿತಿ ಹೊಂದಿದ್ದರು.
ಅವರ ಕೆಲವು ಪ್ರಮುಖ ಕೃತಿಗಳು ಶಾಂತಿನಾಥ ದೇಸಾಯಿ, ಮನೋಹರ ಮಾಳಗಾಂವಕರ, ನೀರ ಮೇಲಿನ ಗುಳ್ಳಿ, ಯು.ಆರ್. ಅನಂತಮೂರ್ತಿ ಸಾಹಿತ್ಯ ಮತ್ತು ವೈಚಾರಿಕತೆ, ಹಿಂಗಾರು, ಸ್ವಾತಂತ್ರ್ಯೋತ್ತರ ಕನ್ನಡ ಕಥಾ ಲೋಕ, ಗಿರೀಶ ಕಾರ್ನಾಡ ಹಾಗೂ ರಂಗಭೂಮಿ, ವಿ.ಸೀ. ಅವರ ಬೆಲೆ ಬಾಳುವ ಬರಹಗಳು ಹೀಗೆ ನೂರಾರು ಕೃತಿಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಕ್ಕೆ ನೀಡಿದ್ದಾರೆ.
ಅವರ ಅಗಲಿಕೆಗೆ ಕನ್ನಡದ ಹಿರಿಯ ಸಾಹಿತಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.