ಉತ್ತರಕನ್ನಡ prajakiran.com : ಕರ್ನಾಟಕ ವಿಧಾನ ಪರಿಷತ್ ಸದಸ್ಯಕ್ಕೆ ಸಿದ್ದಿ ಸಮುದಾಯದ ಶಾಂತಾರಾಮ್ ಸಿದ್ದಿಯವರನ್ನು ನಾಮನಿರ್ದೇಶನ ಮಾಡುವ ಮೂಲಕ ಕರ್ನಾಟಕ ಬಿಜೆಪಿ ಮತ್ತೊಂದು ಮೈಲಿಗಲ್ಲು ಬರೆದಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಇಂತಹ ಅದೃಷ್ಟಶಾಲಿಯಾಗಿದ್ದು. ಅವರ ಆಯ್ಕೆಗೆ ಇಡೀ ರಾಜ್ಯವೇ ಕುತೂಹಲ ಹಾಗೂ ಅಚ್ಚರಿಯಿಂದ ಕಾರವಾರದ ಯಲ್ಲಾಪುರದ ಕಡೆ ನೋಡುವಂತೆ ಮಾಡಿದೆ.
ಸಿದ್ದಿ ಸಮುದಾಯದ ಹೋರಾಟಗಾರ ಶಾಂತರಾಮ್ ವ್ಯಕ್ತಿತ್ವ :
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ಬಹಳ ದೊಡ್ಡದು. ಶಾಂತರಾಮ್ ಸಿದ್ದಿಯವರು ಮೂಲತಃ ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮಪಂಚಾಯಿತಿಯ ಪುರ್ಲೆಯವರು.
ಕಡು ಬಡತನದಲ್ಲಿ ಜನಿಸಿದಅವರು ಸಿದ್ದಿ ಸಮುದಾಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಆದರೆ ಮುಂದೆ ಓದು ಕಲಿಯದೆ ದುಡುಮೆಗಾಗಿ ಹೊರಟ ಇವರನ್ನು ತಡೆದ ಅಂಕೋಲದ ಮದರ್ ತೆರೇಸಾ ಪ್ರೊ.ನಿರ್ಮಲ ಗಾಂವ್ಕರ್ ಅವರ ಆಶ್ರಮದಲ್ಲಿ ಪಿ.ಎಂ.ಹೆಚ್.ಎಸ್.ಗೆ ಸೇರಿ ಹೊಸ ದಾಖಲೆ ಬರೆದರು.
ಆನಂತರ ಕಾಲೇಜು ಶಿಕ್ಷಣಕ್ಕಾಗಿ ಕಾರವಾರದಲ್ಲಿ ಕೂಲಿ ಕೆಲಸ ಮಾಡಿ ಕಾಲೇಜು ಶಿಕ್ಷಣ ಪೂರೈಸಿದ ಸಿದ್ದಿ ಜನಾಂಗದ ಮೊದಲ ಪದವಿಧರ ಕೂಡ ಇವರು ಎಂಬುದು ವಿಶೇಷ,.
ಆ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ನಿಕಟ ಸಂಪರ್ಕ ಹೊಂದಿ ಪೂರ್ಣ ಪ್ರಮಾಣದ ಕಾರ್ಯಕರ್ತರಾಗಿ ದುಡಿದರು.
ಅಲ್ಲದೆ, ವನವಾಸಿ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿ ರಾಜ್ಯದ ಸಿದ್ದ ಸಮುದಾಯಕ್ಕೆ ಸಂಘಟಿಸಿ, ಅವರನ್ನು ಮುಖ್ಯ ವಾಹಿನಿಗೆ ತರಲು ಅವಿರತವಾಗಿ ಶ್ರಮಿಸಿದರು.
ಸಾಮಾನ್ಯ ಜೀವನ ನಡೆಸುತ್ತಿರುವ ಇವರು ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾಡಿನಲ್ಲಿ ಬದುಕು ಕಳೆಯುತ್ತಿರುವುದು ಇವರ ಇನ್ನೊಂದು ವೈಶಿಷ್ಟತೆ.
ಸಿದ್ದಿ ಜನಾಂಗದ ಅಭಿವೃದ್ಧಿಗಾಗಿ ಹಾಗೂ ಹಸಿರು ಉಳಿವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಬದಕು ಕಟ್ಟಿಕೊಂಡಿರುವ ಶಾಂತರಾಮ್ ಸಿದ್ದಿಯವರಿಗೆ ವಿಧಾನ ಪರಿಷತ್ ನಾಮನಿರ್ದೇಶಿತರನ್ನಾಗಿ ಮಾಡಿರುವುದು ಕರ್ನಾಟಕ ಬಿಜೆಪಿ ಹಾಗೂ ಸಿದ್ದಿ ಸಮುದಾಯಕ್ಕೆ ಸಂದ ಗೌರವವಾಗಿದೆ.
ಇವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಅವರನ್ನು ಗುರುತಿಸಿದ ಬಿಜೆಪಿಗೂ ಸಿದ್ದಿ ಸಮುದಾಯಅಭಿನಂದಿಸಿದೆ.