ಧಾರವಾಡ prajakiran.com : ಜಿಲ್ಲೆಯಲ್ಲಿ ೧೭ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆಯ್ಕೆಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆದರೆ ಕೆಲವು ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದೆ, ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸುತ್ತಿರುವುದು ಕಂಡು ಬರುತ್ತಿದೆ.
ಕೋವಿಡ್ ಚಿಕಿತ್ಸೆ ನೀಡಲು ಆಯ್ಕೆಮಾಡಿರುವ ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಥವಾ ರೋಗಿಗಳನ್ನು ನೊಡೆಲ್ ಅಧಿಕಾರಿಗಳ ಅನುಮತಿ ಪಡೆಯದೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ನೊಟಿಫಿಕೇಶನ್ ಮಾಡಿರುವ ೧೭ ಖಾಸಗಿ ಆಸ್ಪತ್ರೆಗಳಿಗೆ ೧೭ ಜನ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ನೊಡೆಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಪ್ರತಿ ನೋಡೆಲ್ ಅಧಿಕಾರಿ ತಮಗೆ ನಿರ್ವಹಿಸಿರುವ ಖಾಸಗಿ ಆಸ್ಪತ್ರೆಯ ಮುಂದೆ ೨೪ ಗಂಟೆ ಲಭ್ಯವಿರುವ ಹೆಲ್ಪ್ ಡೆಸ್ಕ್ ಆರಂಭಿಸಬೇಕು.
ಆಸ್ಪತ್ರೆಯ ಮುಂದೆ ನೋಟಿಸ್ ಬೋರ್ಡ್ ಹಾಕಿ ಅದರಲ್ಲಿ ಆಯಾದಿನದಂದು ಆಸ್ಪತ್ರೆಯಲ್ಲಿ ಖಾಲಿ ಇರುವ ಬೆಡ್ಗಳು, ವೆಂಟಿಲೇಟರ್, ಐಸಿಯು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸೋಂಕಿತರ ವಿವರಗಳನ್ನು ಪ್ರತಿ ದಿನ ಪ್ರಕಟಿಸಬೇಕು.
ಆರೋಗ್ಯ ಇಲಾಖೆ ಮತ್ತು ತಜ್ಞರಿಂದ ಶಿಪಾರಸ್ಸು ಮಾಡುವ ಎಲ್ಲ ಕೋವಿಡ್ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ತಮ್ಮ ಆಸ್ಪತ್ರೆಯಲ್ಲಿಯೇ ಕಡ್ಡಾಯವಾಗಿ ನೀಡಬೇಕು.
ಚಿಕಿತ್ಸೆ ನಿರಾಕರಿಸಿದರೆ ಅಥವಾ ನೋಡೆಲ್ ಅಧಿಕಾರಿಗಳ ಅನುಮತಿ ಪಡೆಯದೆ ಬೇರೆ ಆಸ್ಪತ್ರೆಗೆ ಸೋಂಕಿತರನ್ನು ಸ್ಥಳಾಂತರಿಸಿದರೆ, ಆ ಆಸ್ಪತ್ರೆಗಳ ಮುಖ್ಯಸ್ಥ ಅಥವಾ ಆಡಳಿತ ಮಂಡಳಿ ಮುಖ್ಯಸ್ಥರ ವಿರುದ್ಧ ಆಸ್ಪತ್ರೆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ಸೋಂಕು ನಿವಾರಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಅವರ ಮೇಲೆ ಎಫ್.ಐ.ಆರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ನೋಡೆಲ್ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಬಗ್ಗೆ, ಚಿಕಿತ್ಸೆ, ಖಾಲಿ ಬೆಡ್ಗಳ ವಿವರವನ್ನು ಪ್ರತಿದಿನ ಎರಡು ಸಲ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಮತ್ತು ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ನೀಡುತ್ತಿರಬೇಕು ಎಂದು ಅವರು ಹೇಳಿದರು.