ಧಾರವಾಡ prajakiran.com : ಕೋವಿಡ್ ಸೋಂಕಿನ ತೀವ್ರ ಲಕ್ಷಣಗಳಿರುವ ವ್ಯಕ್ತಿಗಳಿಗೆ ಹಾಸಿಗೆ ಒದಗಿಸುವುದು ಪ್ರಥಮ ಪ್ರಾಶಸ್ತ್ಯದ ಕರ್ತವ್ಯವಾಗಿದೆ.
ಖಾಸಗಿ ಆಸ್ಪತ್ರೆಗಳು ತಾವು ಘೋಷಿಸಿರುವ ಹಾಸಿಗೆಗಳ ಸಂಖ್ಯೆಯನ್ನು ತೀವ್ರ ಲಕ್ಷಣ ಇರುವ ರೋಗಿಗಳಿಗೆ ಒದಗಿಸಬೇಕು.
ಲಕ್ಷಣ ರಹಿತ ಸೋಂಕಿತರು ಮತ್ತು ಸೌಮ್ಯ ಲಕ್ಷಣಗಳಿರುವವರು ಸಿಸಿಸಿ ಅಥವಾ ಹೋಂ ಐಸೋಲೇಷನ್ನಲ್ಲಿ, ಖಾಸಗಿ ಆಸ್ಪತ್ರೆಗಳು ನಿಗದಿತ ಸಂಖ್ಯೆಯ ಹಾಸಿಗೆಗಳನ್ನು ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆಯ ನೇರ ನಿಗಾವಹಿಸಲು ನೇಮಿಸಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೋಂಕಿನ ತೀವ್ರ ಲಕ್ಷಣಗಳಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಬೇಕು. ಅಂತಹ ಯಾವುದೇ ಒಬ್ಬ ರೋಗಿಯೂ ಚಿಕಿತ್ಸೆ ಸೌಲಭ್ಯಗಳಿಂದ ವಂಚಿತರಾಗಬಾರದು. ಖಾಸಗಿ ಆಸ್ಪತ್ರೆಗಳು ಲಕ್ಷಣ ರಹಿತ ಸೋಂಕಿತರನ್ನು ದಾಖಲಿಸಿಕೊಂಡು ಹಾಸಿಗೆಗಳನ್ನು ಒದಗಿಸಿರುವುದಾಗಿ ಘೋಷಿಸಬಾರದು.
ಕೋ ಮಾರ್ಬಿಡಿಟಿ ಲಕ್ಷಣಗಳು ಹಾಗೂ ತೀವ್ರತರ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬೇಕಾದುದು ಮುಖ್ಯ ಲಕ್ಷಣ ರಹಿತರು ಮತ್ತು ಸೌಮ್ಯ ಲಕ್ಷಣಗಳಿರುವವರನ್ನು ಕೋವಿಡ್ ಕೇರ್ ಸೆಂಟರ್ ಹಾಗೂ ಹೋಂ ಐಸೋಲೇಷನ್ಗೆ ಟ್ರಯೇಜಿಂಗ್ ಮೂಲಕ ಶಿಫಾರಸ್ಸು ಮಾಡಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳಾಗಿ ನೇಮಿಸಲ್ಪಟ್ಟ ಅಧಿಕಾರಿಗಳು ಈ ಸಂದರ್ಭದಲ್ಲಿ ೨೪x೭ ತಮ್ಮ ಜವಾಬ್ದಾರಿ ನಿರ್ವಹಿಸಬೇಕು.
ನಿಯೋಜಿಸಲ್ಪಟ್ಟ ಆಸ್ಪತ್ರೆಯಲ್ಲಿ ಲಭ್ಯವಿರುವ ಒಟ್ಟು ಹಾಸಿಗೆಗಳು ಅದರಲ್ಲಿ ಶೇ.೫೦ ರಷ್ಟು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಲಭ್ಯ ಇರುವ ಆಕ್ಸಿಜನ್, ವೆಂಟಿಲೇಟರ್, ಐಸಿಯುಗಳ ಸಕಾಲಿಕ ಮತ್ತು ವಾಸ್ತವ ಮಾಹಿತಿ ನಿಖರವಾಗಿ ಹೊಂದಿರಬೇಕು. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳು ಲಕ್ಷಣ ರಹಿತರು ಅಥವಾ ಸೌಮ್ಯ ಲಕ್ಷಣಗಳಿರುವ ವ್ಯಕ್ತಿಗಳಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಂತಹ ವ್ಯಕ್ತಿಗಳು ಆಸ್ಪತ್ರೆಯಲ್ಲಿಯೇ ಇರಲು ಸ್ವಇಚ್ಛೆಯಿಂದ ಬಯಸಿದರೆ, ಕೋವಿಡ್ ಚಿಕಿತ್ಸೆಗೆ ಘೋಷಿಸಿರುವ ಶೇ.೫೦ ಹಾಸಿಗೆಗಳನ್ನು ಹೊರತುಪಡಿಸಿ ಉಳಿದ ಹಾಸಿಗೆಗಳಲ್ಲಿ ಚಿಕಿತ್ಸೆ ನೀಡಬೇಕು ಎಂದರು.
ಚಿಕಿತ್ಸೆ ಪಡೆಯುತ್ತಿರುವ ಪ್ರತಿಯೊಬ್ಬ ರೋಗಿಗಳ ಬಗ್ಗೆಯೂ ತಜ್ಞರ ಸಮಿತಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಪರಿಶೀಲನೆ ನಡೆಸಲಾಗುವುದು.
ಈ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಅಗತ್ಯ ಇರುವವರಿಗೆ ಹಾಸಿಗೆ ಮತ್ತು ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದೇ ಪ್ರಮುಖ ಮತ್ತು ಮಹತ್ವದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಡಾ.ಷಣ್ಮುಖ, ಡಾ.ಎಸ್.ಎಂ.ಹೊನಕೇರಿ, ಡಾ.ಶಶಿ ಪಾಟೀಲ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.