ಧಾರವಾಡ ಪ್ರಜಾಕಿರಣ.ಕಾಮ್ : ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಗಡಿಪಾರು ಮಾಡಲು ಒತ್ತಾಯಿಸಿ ನೂರಾರು ಆಟೋ ಚಾಲಕರು ಧಾರವಾಡದ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ನಾಗರಾಜ ಕಿರಣಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಕೊರವರ,
ವಿದ್ಯಾನಗರಿ ಧಾರವಾಡದಲ್ಲಿ ಪುಂಢರು ಹಾವಳಿ ವಿಪರೀತ ಹೆಚ್ಚಿದೆ.
ಹಲವರಂತೂ ಗ್ಯಾಂಗ್ ಕಟ್ಟಿಕೊಂಡು ರಾಜಾರೋಷವಾಗಿ ಅಂಧಾ ದರ್ಬಾರ್ ನಡೆಸುತ್ತಿದ್ದಾರೆ. ಇನ್ನು ಕೆಲವು ಮರಿ ಪುಢಾರಿಗಳು, ರೌಡಿಶೀಟರ್ ಗಳು ಪೊಲೀಸರ ಭಯವಿಲ್ಲದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಹಲ್ಲೆ ನಡೆಸುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ಧಾರವಾಡ ನಗರದ ಮೂರು ಸ್ಟೇಶನ್ ವ್ಯಾಪ್ತಿಯಲ್ಲಿ ಹಲವಾರು ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿವೆ.
ಇದರಿಂದಾಗಿ ಧಾರವಾಡ ನಗರದಲ್ಲಿ ಮೇಲ್ನೋಟಕ್ಕೆ ಕಾನೂನು ಸುವ್ಯವಸ್ಥೆ ಕುಸಿದಂತೆ ಕಂಡು ಬರುತ್ತಿದ್ದು ಸಾರ್ವಜನಿಕರು ನಿರ್ಭಯವಾಗಿ ಓಡಾಡಲು ಹೆದರುವಂತಾಗಿದೆ ಎಂದು ಹೇಳಲು ನಮಗೆ ಬೇಸರವಾಗುತ್ತಿದೆ ಎಂದರು.
ಅಮಾಯಕರ ಜೀವರಕ್ಷಣೆ ಮಾಡುವುದು ಹಾಗೂ ನೈತಿಕ ಪೊಲೀಸಗಿರಿಗೆ ಬ್ರೇಕ್ ಹಾಕುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಗ್ರಹಿಸಿದರು.
ಇದರ ಜೊತೆಗೆ ಧಾರವಾಡದಲ್ಲಿ ಗಾಂಜಾ ಅವ್ಯಾಹತವಾಗಿ ಮಾರಾಟವಾಗುತ್ತಿದ್ದು, ಹಲವಡೆ ಅಕ್ರಮ ಇಸ್ಪೀಟು ಕ್ಲಬ್ ತಲೆ ಎತ್ತಿವೆ. ಮಟ್ಕಾ, ಓಸಿ ದಂಧೆಗಳು ಎಗ್ಗಿಲ್ಲದಂತೆ ಸಾಗಿವೆ. ಇದರಿಂದಾಗಿ ಸಾವಿರಾರು ಬಡಕುಟುಂಬಗಳು ಬೀದಿಗೆ ಬೀಳುತ್ತಿವೆ.
ಈ ಹಿನ್ನೆಲೆಯಲ್ಲಿ ತಾವು ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪೊಲೀಸರಿಗೆ ಹಾಗೂ ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರೆದರೆ ಬರುವ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಜನಜಾಗೃತಿ ಸಂಘ್ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ,
ಮಾ. 23ರಂದು ಧಾರವಾಡ ಹೆಬ್ಬಳ್ಳಿ ಅಗಸಿಯ ಸಾಗರ ಪಾನ್ ಶಾಪ್ ಮಾಲೀಕ ಪ್ರಸಾದ ಶೆಟ್ಟಿ ಯವರ
ಮೇಲೆ ರೌಡಿಶೀಟರ್ ಗಳಾದ ನವೀನ ಶಲವಡಿ, ಸತೀಶ ಗೋಕಾವಿ ಹಾಗೂ ಅಭಿಜಿತ್ ಹುಡೇದ ಹಾಗೂ ಅವರ ಗ್ಯಾಂಗ್ ಅನಗತ್ಯವಾಗಿ ಗಲಾಟೆ ಮಾಡಿದೆ.
ಅಲ್ಲದೆ, ಹಲವಾರು ಗಾಜಿನ ಬಾಟಲುಗಳಿಂದ ದಾಳಿ ನಡೆಸಿದೆ. ಆದರೆ ಅವರು ತಪ್ಪಿಸಿಕೊಂಡ ಪರಿಣಾಮ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಆದರೂ ಅವರಿಗೆ ಕೊಲೆ ಬೆದರಿಕೆ ಹಾಕಿದ ಪರಿಣಾಮ ಜೀವ ರಕ್ಷಣೆ ಕೋರಿ ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದಾದ ಬಳಿಕ ಮಧ್ಯರಾತ್ರಿ ಆಲೂರು ವೆಂಕಟರಾಯರ ವೃತದಲ್ಲಿ ನಿಂತು ಇದೇ ಗ್ಯಾಂಗ್ ರಸ್ತೆಯಲ್ಲಿ ಹಾದು ಹೋಗುವ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದೆ.
ಆ ಬಳಿಕ ಮಾ. 24ರ ಬೆಳಗಿನ ಜಾವ ಧಾರವಾಡ ಹೊಸ ಬಸ್ ನಿಲ್ದಾಣ ಬಳಿಯಿರುವ ಚಹಾ ಅಂಗಡಿಯಲ್ಲಿ ಗಲಾಟೆ ಮಾಡಿ ಹಲವರಿಗೆ ಮನಬಂದಂತೆ ಥಳಿಸಿಲು ಆರಂಭಿಸಿದ್ದಾರೆ.
ಆಗ ಕಕ್ಕಾಬಿಕ್ಕಿಯಾಗಿ ಕೆಲವರು ಓಡಿ ಹೋಗಿ ರಕ್ಷಣೆಗೆ ಅಂಗಲಾಚಿದ್ದಾರೆ. ಆಗ ಅಲ್ಲಿಯೇ ಸ್ಥಳದಲ್ಲಿ ಇದ್ದ ಆಟೋ ಚಾಲಕ ಮುಕ್ತುಂಸಾಬ ಸಲಿಕೆ ಜಗಳ ಬಿಡಿಸಲು ಹೋದಾಗ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಇದರಿಂದಾಗಿ ಮುಕ್ತುಂಸಾಬ ಸಲಿಕೆ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತೆಲೆಗೆ ಸುಮಾರು ಹದಿನೇಳು ಹೊಲಿಗೆ ಬಿದ್ದಿವೆ.
ಕೊನೆಗೆ ಅವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ರಾತ್ರಿ ಹೊರಬಂದಿದ್ದಾರೆ.
ಧಾರವಾಡ ಹೊಸ ಬಸ್ ನಿಲ್ದಾಣದ ಆಟೋ ಚಾಲಕ ಮುಕ್ತುಂಸಾಬ ಸಲಿಕೆ ಮೇಲಿನ ಮಾರಣಾಂತಿಕ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಈ ಕುರಿತು ಅವರ ಸಂಬಂಧಿಕರು ಕೂಡ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲು ಮಾಡಿದ್ದಾರೆ.
ಆದರೆ ಧಾರವಾಡದ ಉಪನಗರ ಪೊಲೀಸರು ಅವರಿಬ್ಬರ ಮೇಲೆ ರೌಡಿಶೀಟರ್ ಇದ್ದರೂ ಕೂಡ ಕೆಲವೇ ದಿನಗಳ ಹಿಂದೆಯಷ್ಟೇ ಒಬ್ಬ ಕೊಲೆ ಪ್ರಕರಣದಲ್ಲಿ ಹಾಗೂ ಇನ್ನೊಬ್ಬ ಮತ್ತೊಂದು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ ಮಾಹಿತಿ ಇದ್ದರೂ ಅವರಿಗೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ
ಅವರ ಮೇಲೆ ಕೊಲೆಗೆ ಯತ್ನದಂತಹ ಗಂಭೀರವಾದ ಸೆಕ್ಷನ್ ಹಾಕದೆ ಸ್ಟೇಶನ್ ಬೇಲ್ ನೀಡುವ ಮೂಲಕ ನೂರಾರು ಆಟೋ ಚಾಲಕರಿಗೆ ಹಾಗೂ ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಾರ್ವಜನಿಕರಿಗೆ ಯಾವ ಸಂದೇಶ ರವಾನೆ ಮಾಡಲು ಬಯಸಿದ್ದಾರೆ ಎಂಬ ಯಕ್ಷಪ್ರಶ್ನೆ ನಮಗೆ ಕಾಡುತ್ತಿದೆ ಎಂದರು.
ಪರಿಸ್ಥಿತಿ ಹೀಗೆ ಮುಂದುವರೆದರೆ ಪುಂಢರಿಗೆ, ರೌಡಿಶೀಟರ್ ಗಳಿಗೆ ಪೊಲೀಸರ ಬಗ್ಗೆ ಭಯವಿಲ್ಲದಂತಾಗಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಹೀಗಾಗಿ ಈ ಇಬ್ಬರ ಮೇಲೆ ಗೂಂಡಾ ಕಾಯಿದೆ ಅಡಿ ಧಾರವಾಡದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸುತ್ತೇವೆಎಂದರು.
ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ
ರಾಘವೇಂದ್ರ ಶೆಟ್ಟಿ, ಆನಂದ ಪಾಟೀಲ,ಸುರೇಶ ಕೋರಿ, ಶಿವರಾಜ ಮೋತಿ, ಲಾಲ್ ಸಾಬ,ಆಟೋ ಚಾಲಕರ ಸಂಘದ ಮುಖಂಡರಾದ ಜೀವನ ಹುತ್ಕರಿ, ಮಲ್ಲೇಶ ಅಂಬಿಗೇರ, ನವೀನ ಸುಬೇದಾರ, ಪ್ರಕಾಶ ದೇವಾಂಗ, ಮುನೀರ ಪಟೇಲ,ಖಾಜಾ ಚೌಧರಿ,ಜಾಫರ್ ರಾಟಿಮನಿ, ಲಕ್ಷ್ಮಣ ಜಮನಾಳ, ಫ್ರಾನ್ಸಿಸ್ ಸಕ್ರಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು