ಬೆಳಗಾವಿ ಪ್ರಜಾಕಿರಣ.ಕಾಮ್ : ಜಿಲ್ಲೆಯ ಖ್ಯಾತ ಉದ್ಯಮಿ, ಆದಿತ್ಯ ಮಿಲ್ಕ್ ಸಂಸ್ಥಾಪಕ ಶಿವಕಾಂತ ಎಸ್. ಸಿದ್ನಾಳ (48) ಅವರು ಶನಿವಾರ ವಿಧಿವಶರಾದರು.
ಅವರಿಗೆ ಪತ್ನಿ ದೀಪಾ ಸಿದ್ನಾಳ, ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ.
ಮೂಲತಃ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ಶಿವಕಾಂತ ಸಿದ್ನಾಳ ಅವರು ಆದಿತ್ಯ ಮಿಲ್ಕ್ ಉದ್ಯಮ ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದರು.
ವಿಆರ್ಎಲ್ ಸಂಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಅಳಿಯರಾಗಿದ್ದ ಶಿವಕಾಂತ ಸಿದ್ನಾಳ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಶಿವಕಾಂತ ಸಿದ್ನಾಳ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದ ಆದಿತ್ಯ ಮಿಲ್ಕ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಭಾನುವಾರ ಮಧ್ಯಾಹ್ನ 12 ಗಂಟೆಯಿಂದ ಅಂತಿಮ ದರ್ಶನಕ್ಕೆ ಅವಕಾಶವಿದ್ದು, 3 ಗಂಟೆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ.