ಬೆಳಗಾವಿ prajakiran.com : ಕೊಗನೋಳಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಹಾಸನ ಜಿಲ್ಲೆಯ 4 ಪೊಲೀಸರಲ್ಲಿ ಕರೋನಾ ಸೋಂಕು ಪತ್ತೆಯಾಗಿರುವುದು ನಿಪ್ಪಾಣಿಯಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕ ಪ್ರವೇಶಿಸುತ್ತಿರುವ ಜನರನ್ನು ನಿಯಂತ್ರಣ ಮಾಡಲು ಹಾಗೂ ಅವರವರ ಜಿಲ್ಲೆಗಳಿಗೆ ತೆರಳಿ ಕ್ವಾರೆಂಟನ್ನಲ್ಲಿಡಲು ದೃಷ್ಟಿಯಿಂದ ಬೆಳಗಾವಿ ಆಡಳಿತ ಸರ್ಕಾರಕ್ಕೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಹಾಸನ ಜಿಲ್ಲೆಯ ಪೊಲೀಸರು ನಿಪ್ಪಾಣಿ ಬಳಿಯ ಕೋಗನೋಳಿ ಚೆಕ್ಪೋಸ್ಟ್ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಕೊಗನೋಳಿ ಚೆಕ್ ಪೋಸ್ಟನಲ್ಲಿ ಕೆಲಸ ಮಾಡುತಿದ್ದ ಹಾಸನ ಜಿಲ್ಲೆಯ ನಾಲ್ಕು ಪೊಲೀಸರಿಗೆ ಕರೋನಾ ಅಂಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪ್ರತಿ ದಿನ ಕೊಗನೋಳಿ ಗ್ರಾಮದ ಹತ್ತಿರದ ಚೆಕ್ ಪೋಸ್ಟ್ ಮೂಲಕ ಸುಮಾರು 4-5 ಸಾವಿರ ಜನರು ಈ ಪಾಸ್ ಅನ್ನು ತೆಗೆದುಕೊಂಡು ಬಂದಿದ್ದಾರೆ. ಮಹಾರಾಷ್ಟ್ರ, ಗುಜರಾತ್ ರಾಜಸ್ಥಾನ, ಮಧ್ಯಪ್ರದೇಶದಿಂದ ಜನರು ಆಗಮಿಸಿದ್ದಾರೆ.
ಇವರ ಜೊತೆಗೆ ಈ ಪಾಸ್ ಇಲ್ಲದೆ ಸಾವಿರಾರು ಜನರು ಕಳ್ಳದಾರಿಯಲ್ಲೂ ಆಗಮಿಸುತ್ತಿದ್ದರು. ಇವರನ್ನು ನಿಯಂತ್ರಣ ಮಾಡುವುದೇ ಬೆಳಗಾವಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.
ಈಗ ಹಾಸನ ಜಿಲ್ಲೆಯ ಪೊಲೀಸರಿಗೂ ಕರೋನಾ ವಕ್ಕರಿಸಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದ ನಂತರ ಪೊಲೀಸ್ ಇಲಾಖೆ ಸೇರಿ ಕೊರೋನಾ ಕರ್ತವ್ಯದಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ದಾರೆ.