ಬೆಂಗಳೂರು prajakiran.com : ರಾಜ್ಯದಲ್ಲಿ ಬುಧವಾರವೂ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ 122 ಕೇಸ್ ಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.
ಆ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ2405ಕ್ಕೆ ಏರಿದೆ. ಈ ಪೈಕಿ 25 ಮಕ್ಕಳಿಗೆ ಕರೋನಾ ಅಟ್ಯಾಕ್ ಮಾಡಿದೆ. ಅದರಲ್ಲೂ 15 ವರ್ಷದೊಳಗಿನ 25 ಮಕ್ಕಳಿಗೆ ಕರೋನಾ ಕಾಣಿಸಿಕೊಂಡಿರುವುದು ಪೋಷಕರಿಗೆ ಆತಂಕ ತಂದಿದೆ.
ಇದರಲ್ಲಿ ಯಾದಗಿರಿಯ ಒಂದು ವರ್ಷದ ಮಗು, ಬೆಳಗಾವಿಯಲ್ಲಿ ಎರಡು ವರ್ಷದ ಹೆಣ್ಣು ಮಗು ಹಾಗೂ ಹಾಸನದಲ್ಲಿ ಮೂರು ವರ್ಷದ ಮಗುವನ್ನು ಕ್ರೂರಿ ಕರೋನಾ ಕಾಡುತ್ತಿದೆ.
ಬಿಸಲನಾಡು ಕಲಬುರಗಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 28 ಪ್ರಕರಣಗಳು ದೃಢಪಟ್ಟಿವೆ. ಕಲಬುರಗಿಯ 28 ಕೇಸ್ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಾಗಿದ್ದಾರೆ. ಇವರೆಲ್ಲರೂ ಆಳಂದ ಹಾಗೂ ಸೇಡಂ ಕ್ವಾರಂಟೆನ್ ಕೇಂದ್ರಗಳಲ್ಲಿದ್ದರು.
ಉಡುಪಿಯ 9 ಜನರಿಗೆ ಸೋಂಕು ತಗುಲಿದೆ. ಉಡುಪಿಯಲ್ಲಿ 9 ಜನರ ಪೈಕಿ ಮಹಾರಾಷ್ಟ್ರದಿಂದ 6 ಜನ ಬಂದಿದ್ದರು. ಉಡುಪಿ ಸೋಂಕಿತರ ಸಂಖ್ಯೆ 120ಕ್ಕೆ ಏರಿದೆ. 6 ಪುರುಷರು,ಇಬ್ಬರು ಮಹಿಳೆಯರು, ಒಂದು ಮಗುವಿದೆ.
ಮುಂಬಯಿಯಿಂದ ಬಂದ ನಾಲ್ವರಿಗೆ ಸೋಂಕು ತಗುಲಿರುವುದು ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಬುಧವಾರ 11 ಜನರಿಗೆ ಸೋಂಕು ತಗುಲಿದೆ. ಹಾಸನದಲ್ಲಿ 14, ಯಾದಗಿರಿ ಜಿಲ್ಲೆಯಲ್ಲಿ16, ಬೀದರ ನಲ್ಲಿ13, ರಾಯಚೂರು 5, ಚಿಕ್ಕಮಗಳೂರು 3, ಬೆಂಗಳೂರು 6, ಬೆಂಗಳೂರು ಗ್ರಾಮಾಂತರ 2, ಉತ್ತರ ಕನ್ನಡ 6, ತುಮಕೂರು, ವಿಜಯಪುರ, ಬಳ್ಳಾರಿ ಮಂಡ್ಯದಲ್ಲಿ ತಲಾಒಂದು ಕೇಸ್ ಬಂದಿವೆ.
ಆ ಮೂಲಕ ರಾಜ್ಯದ 122 ಕೇಸ್ ಗಳಲ್ಲಿ 110 ಕೇಸ್ ಗಳಿಗೆ ಮಹಾರಾಷ್ಟ್ರ ನಂಟಿದೆ. ಬೆಂಗಳೂರಿಗೆ ಇವತ್ತು ಯುಇಎ ನೇಪಾಳ ನಂಟು ಆವರಿಸಿದೆ. ಇವರಲ್ಲಿ ಇಬ್ಬರ ಪೈಕಿ ಒಬ್ಬರು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯಾಗಿದ್ದರೆ, ಇನ್ನೊಬ್ಬರು ಯುಎಇ ದಿಂದ ಬಂದ ಮಹಿಳೆಗೂ ಕೂಡ ಕರೋನಾ ನಂಜಿದೆ.
ಇನ್ನೂ ಯಾದಗಿರಿಯಲ್ಲಿ 69 ವರ್ಷದ ಮಹಿಳೆ ಕರೋನಾಗೆ ಬಲಿಯಾಗಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಅವರು ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಬಂದಿದ್ದರು. ಅವರಿಗೆ ಸೋಂಕು ಇರುವುದು ಮೇ 20ರಂದು ಗೊತ್ತಾಗಿತ್ತು. ಕೇವಲ ಒಂದು ವಾರದಲ್ಲಿಯೇ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.