ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳ ತಂಡ ಅಂದು ರಾಜ್ಯದ ಗೃಹ ಸಚಿವರಾಗಿದ್ದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರನ್ನು ವಿಚಾರಣೆಗೊಳಪಡಿಸಿ, ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ.
ಅ. 10ರಂದು ಶನಿವಾರ ಬೆಂಗಳೂರಿನ ಡಾ. ಜಿ. ಪರಮೇಶ್ವರ ಅವರ ಮನೆಯಲ್ಲಿಯೇ ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ.
ಈ ವೇಳೆ ಅವರು ಅಂದು ನೀಡಿದ್ದ ಭೂ ವಿವಾದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದಿದ್ದ ಹೇಳಿಕೆ ಕುರಿತು ಎಳೆ ಎಳೆಯಾಗಿ ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ಅಂದು ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆಯಾದ ಒಂದು ಗಂಟೆಯಲ್ಲಿಯೇ ಈ ಹೇಳಿಕೆ ನೀಡಿದ್ದ ಗೃಹಸಚಿವರಿಗೆ ಅದರಿಂದಾಗಿ ಸಂಕಷ್ಟ ಎದುರಾದಂತಾಗಿದೆ.
ತಕ್ಷಣವೇ ಆ ಹೇಳಿಕೆ ನೀಡಲು ಕಾರಣವೇನು. ನಿಮಗೆ ಯಾರು ಈ ಮಾಹಿತಿಯನ್ನು ಪೂರೈಸಿದ್ದರು. ನಿಮ್ಮ ಜೊತೆಗೆ ಅಂದು ಯಾರೆಲ್ಲ ಇದ್ದರೂ ಎಂಬುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಮಾಡುವ ಮೂಲಕ ಅವರನ್ನು ಕ್ಷಣಕಾಲ ತಬ್ಬಿಬ್ಬುಗೊಳಿಸಿದ್ದಾರೆ.
ಇದರಿಂದಾಗಿ ಗಲಿಬಿಲಿಗೊಂಡ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅವರು ತಮ್ಮ ಪಕ್ಕದಲ್ಲಿಯೇ ನಿಂತಿದ್ದ ಆಗಿನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಂದಿನ ಡಿಜಿಪಿ ಮಾಹಿತಿ ಆಧರಿಸಿ ಹೇಳಿಕೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಅಂದಿನ ಧಾರವಾಡದ ಮಾಜಿ ಸಚಿವರಿಗೆ ಮತ್ತಷ್ಟು ಕಂಟಕ ಎದುರಾದಂತಾಗಿದೆ ಎನ್ನಲಾಗುತ್ತಿದೆ.