ವಿಜಯಪುರ prajakiran.com :
ರಾಜ್ಯ ಸರ್ಕಾರದ ಹಣದಿಂದ ಪಂಚಮಸಾಲಿ ಸಮಾಜದ ಹರಿಹರ ಪೀಠದ ಮಠದಲ್ಲಿ ಯಾವುದೋ ಒಬ್ಬ ಮಂತ್ರಿಗೆ ಸೇರಿದ ಸಂಸ್ಥೆಯ ಅಡಿಯಲ್ಲಿ ಉದ್ಯೋಗ ಮೇಳ ಮಾಡುವುದು ಯಾವ ಕಾನೂನಿನ ಅಡಿಯಲ್ಲಿ ಇದೆ ಎಂಬುದು ಸ್ಪಷ್ಟಪಡಿಸಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ತಮ್ಮದೆ ಸರಕಾರದ ಸಚಿವ ಮುರುಗೇಶ ನಿರಾಣಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಜನ ಸಾಮಾನ್ಯರ ತೆರಿಗೆ ಹಣದಲ್ಲಿ ಬೇಕಾಬಿಟ್ಟಿ ಖರ್ಚು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಮೂರನೇ ಪೀಠ ಸಚಿವ ನಿರಾಣಿಗಾಗಿ ಸ್ಥಾಪಿಸಲಾಗಿದೆ. ಸಮಾಜದ ಸಾಕಷ್ಟು ಮಠಗಳು ಈಗಾಗಲೇ ನಾಡಿನಲ್ಲಿ ಇವೆ. ಅದರ ಅವ್ಯಶಕತೆ ಸಮಾಜಕ್ಕೆ ಇರಲಿಲ್ಲ ಎಂದು ಹೇಳಿದರು.
ಈ ಹಿಂದೆ ಯಡಿಯೂರಪ್ಪ ಅವರಿಗೆ
ಬ್ಲಾಕಮೇಲ್ ಮಾಡಿ ಹತ್ತು ಕೋಟಿ ಪಡೆದಿದ್ದರು. ಈಗ ಬೊಮ್ಮಾಯಿ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ 35 ಕೋಟಿ ತುಂಗಾ ಆರತಿ ಹೆಸರಿನಲ್ಲಿ ಅನುದಾನ ಪಡೆದಿದಿದ್ದಾರೆ.
ಈ ಬ್ಲ್ಯಾಕ್ ಮೇಲ್ ಪೀಠವನ್ನು ನಮ್ಮ ಸಮಾಜ ಒಪ್ಪಿಲ್ಲ, ಒಪ್ಪುವುದು ಇಲ್ಲ. ಸಮಾಜದ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಗುಡುಗಿದರು.
ನೀವು ಪಂಚಮಸಾಲಿ ಸಮಾಜದ ಕಡು ವಿರೋಧಿಗಳು ಎಂಬುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿರುವ ವಿಚಾರವೇ ಆಗಿದೆ.
ನೀವು ಯಾವುದೋ ವೇದಿಕೆ ಮೇಲೆ ನಿಂತು ಭಾಷಣ ಹೊಡಿದರೆ ನಂಬಲು ಸಮಾಜ ತಯಾರಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ವಿರುದ್ದ ಬಸವನಗೌಡ ಪಾಟೀಲ ಯತ್ನಾಳ ಗುಡುಗಿದರು.