ಧಾರವಾಡ prajakiran.com : ಹಗರಣ, ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದೀಗ ಪ್ರಾಧ್ಯಾಪಕರೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಅವ್ಯವಹಾರಗಳ ಬಗ್ಗೆ ಪ್ರೊಫೆಸರ್ಗಳು ನಡೆಸಿದ ಸಂಭಾಷಣೆಯ ಆಡಿಯೋ ಇದಾಗಿದ್ದು, ಇದೀಗ ವಿವಿ ಅಂಗಳದಲ್ಲಿ ಭಾರೀ ತಳಮಳ ಸೃಷ್ಟಿಸಿದೆ.
ವಿವಿಯ ಕರ್ಮಕಾಂಡದ ಕುರಿತು ಎಳೆ ಎಳೆಯಾಗಿ ಮಾತನಾಡಿರುವ 18 ನಿಮಿಷಗಳ ಆಡಿಯೋ ಇದಾಗಿದೆ.
ಈ ಆಡಿಯೋ ಕರ್ನಾಟಕ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಸಹ ಸಂಯೋಜಕ ಜಗದೀಶ ಕಿವಡನ್ನವರ ಅವರದ್ದು ಎನ್ನಲಾಗುತ್ತಿದೆ.
ತಮ್ಮ ಆಪ್ತರೊಂದಿಗೆ ನಡೆಸಿರೋ ಈ ಆಡಿಯೋ ಸಂಭಾಷಣೆ ಕವಿವಿಯಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ.
ಅದರಲ್ಲೂ ಪ್ರಮುಖವಾಗಿ ಕವಿವಿಯ ಸಿಂಡಿಕೇಟ್ ಸದಸ್ಯರಿಬ್ಬರು ಹಾಗೂ ಹಿಂದಿನ ಪ್ರಭಾರಿ ಕುಲಪತಿ ನಡೆಸಿರುವ ಅವ್ಯವಹಾರಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಆದರೆ ಜಗದೀಶ ಕಿವಡನ್ನವರ ಇದನ್ನು ನಿರಾಕರಿಸಿದ್ದು, ತಮ್ಮ ಆಡಿಯೋ ನಕಲು ಮಾಡಲಾಗಿದೆ. ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬರೆದುಕೊಟ್ಟಿದ್ದು, ಈ ಬಗ್ಗೆ ಕ್ಷಮಾಪಣೆ ಕೂಡ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಪ್ರಕರಣಕ್ಕೆ ತೇಪೆ ಹಾಕಲಾಗಿದ್ದರೂ, ಆಡಿಯೋ ಮಾತ್ರ ಮೊಬೈಲ್ ನಿಂದ ಮೊಬೈಲ್ ಗೆ ಹರಿದಾಡುತ್ತಲೇ ಇದೆ. ಇದು ಜಿಲ್ಲೆಯ ಜನಪ್ರತಿನಿಧಿಗಳಿಗೂ, ಪಕ್ಷದ ಮುಖಂಡರಿಗೂ ಹಾಗೂ ಕಾರ್ಯಕರ್ತರಿಗೆ ತಲೆ ನೋವಾಗಿರುವುದು ಸುಳ್ಳಲ್ಲ.