ಹಾವೇರಿ (ಶಿಗ್ಗಾಂವಿ) prajakiran.com : ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ನೋಡುತ್ತಿದ್ದಾಗ ಪ್ರೇಕ್ಷಕನೊಬ್ಬ ಮತ್ತೊಬ್ಬ ಪ್ರೇಕ್ಷಕನಿಗೆ ಗುಂಡು ಹಾರಿಸಿರುವ ಪ್ರಕರಣ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.
ಶಿಗ್ಗಾಂವಿಯ ರಾಜೇಶ್ವರಿ ಥೇಟರ್ ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದೆ.
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ (28) ಗುಂಡೇಟು ತಿಂದು ಗಾಯಗೊಂಡವ.
ಬುಲೆಟ್ ನಿಂದ ಗಾಯಗೊಂಡ ವಸಂತ ನನ್ನ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಆತನ ಹೊಟ್ಟಯಲ್ಲಿದ್ದ ಗುಂಡುಗಳನ್ನು ಹೊರಗೆ ತೆಗೆಯಲಾಗಿದೆ.
ವಸಂತಕುಮಾರ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ.
‘ಕೆಜಿಫ್-2′ ಸಿನಿಮಾ ನೋಡುವ ಸಂರ್ದಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದು ಪಿಸ್ತೂಲಿನಿಂದ ಗುಂಡು ಹಾರಿಸುವ ಮಟ್ಟಿಗೆ ಹೋಗಿ ತಲುಪಿದೆ.
ಸಿನಿಮಾ ನೋಡುವ ಸಂದರ್ಭದಲ್ಲಿ ಮುಂದಿನ ಕುರ್ಚಿಯ ಮೇಲೆ ವಸಂತಕುಮಾರ ಶಿವಪುರ ಕಾಲಿಟ್ಟಿದ್ದ ಎಂಬ ಕಾರಣಕ್ಕೆ ಮುಂದಿನ ಕುರ್ಚಿಯಲ್ಲಿದ್ದ ವ್ಯಕ್ತಿ ಕಾಲು ತೆಗೆಯುವಂತೆ ಹೇಳಿದ್ದಾನೆ.
ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು,ಇಬ್ಬರು ಜಗಳ ಮಾಡಿದ್ದಾರೆ.
ತಕ್ಷಣ ರೊಚ್ಚಿಗೆದ್ದ ಬಂದೂಕುಧಾರಿ ವ್ಯಕ್ತಿ 2-3 ಬುಲೆಟ್ ಗಳನ್ನು ನೇರವಾಗಿ ಆತನ ಹೊಟ್ಟೆಗೆ ಹಾಕಿದ್ದಾನೆ.
ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ, ತನಿಖೆಯನ್ನು ಕೈಗೊಂಡಿದ್ದಾರೆ.