ಧಾರವಾಡ prajakiran.com : ಮಹಾನಗರ ಪಾಲಿಕೆಯ ಚುನಾವಣೆಗೆ ಜಾತ್ಯತೀತ ಜನತಾದಳ ಪಕ್ಷದವತಿಯಿಂದ ವಾರ್ಡ್ ನಂ.೧೯ ರಿಂದ ಸ್ಪರ್ಧಿಸಬಯಸಿದ್ದ ಅಭ್ಯರ್ಥಿಯ ನಾಮಪತ್ರ ಸ್ವೀಕರಿಸದ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಮಹಾನಗರ ಜಿಲ್ಲಾ ಜಾ.ದಳ ಅಧ್ಯಕ್ಷ ಗುರುರಾಜ ಹುಣಸಿಮರದ, ಈ ಕುರಿತು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮೇಲಿನ ವಿಶ್ವಾಸವನ್ನು ಜನ ಕಳೆದುಕೊಳ್ಳುವ ಮೊದಲು ಆಯೋಗ ತನ್ನ ಕರ್ತವ್ವಯವನ್ನು ನಿಭಾಯಿಸಬೇಕು ಎಂದು ಆಗ್ರಹಿಸಿದರು.
ನಿನ್ನೆ ವಾರ್ಡ್ ನಂರ ೧೯ ರಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಬಯಸಿ ನಾಮಪತ್ರ ಸಲ್ಲಿಸಲು ಹೋಗಿದ್ದ ಹಸೀನಾಬಾನು ಟಪಾಲವಾಲೆ ಅವರಿಗೆ ನಾಮಪತ್ರ ಸ್ವೀಕಾರಕ್ಕೆ ಸಮಯ ಬೇಕಾಗುತ್ತದೆ ಎಂಬ ಕಾರಣದಿಂದ ನಿಗದಿತ ಸಮಯದೊಳಗೆ ಕಚೇರಿಯಲ್ಲಿದ್ದವರಿಗೆ ಕೂಪನ್ ಕೊಡಲಾಗಿದೆ.
ನಂತರ ನಾಮಪತ್ರದಲ್ಲಿನ ಕೆಲವು ದಾಖಲೆಗಳನ್ನು ದೃಢೀಕರಣ ಮಾಡಿಸುವಂತೆ ಅರ್ಜಿ ವಾಪಸ್ಸು ಮಾಡಿದ್ದಾರೆ. ಸವರೂ ಸೂಚಿಸಿದಂತೆ ಎಲ್ಲ ಸರಿಪಡಿಸಿ ನಾಮಪತ್ರ ಸಲ್ಲಿಸಲು ಹೋದರೂ ಸ್ವೀಕರಿಸದೇ ನಾಮಪತ್ರ ಸ್ವೀಕರಿಸಬೇಕಿದ್ದ ಅಧಿಕಾರಿ ಪ್ರಭಾಕರ ಅಂಗಡಿ ಕರ್ತವ್ಯ ಲೋಪ ಮಾಡಿದ್ದಾರೆ.
ನಮ್ಮ ಅಭ್ಯರ್ಥಿಯ ನಾಮಪತ್ರ ಸ್ವೀಕರಿಸದ ಅಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಈ ಬಗ್ಗೆ ಆಯೋಗದ ನಿಯಮಾವಳಿ ವಿಡೀಯೋ ದೃಶ್ಯ ನೀಡುವಂತೆ ಕೋರಿದರೆ, ಪೂರ್ಣ ದೃಶ್ಯಾವಳಿ ನೀಡಿಲ್ಲ.
ಹೀಗಾಗಿ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಭಾವನೆ ಬರುತ್ತಿದೆ. ಈ ಬಗ್ಗೆ ಪೊಲೀಸರಿಗೆ ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ತಮಗೆ ಅಧಿಕಾರಿಗಳಿಂದ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ಪ್ರಸಕ್ತ ಪಾಲಿಕೆ ಚುನಾವಣೆಯಲ್ಲಿ ಅಧಿಕಾರಿಗಳಲ್ಲಿ ಪಾರದರ್ಶಕತೆಯ ಕೊರತೆ ಕಂಡು ಬರುತ್ತಿದೆ. ಆದ್ದರಿಂದ ಆಯೋಗ ಕಾನೂನಿನಂತೆ ನಡೆದುಕೊಳ್ಳು ಅಧಿಕಾರಿಗಳಿಗೆ ಸೂಚಿಸುವ ಮೂಲಕ ತನ್ನ ಬದ್ಧತೆ ತೋರಿಸಬೇಕು ಎಂದು ಹುಣಸಿಮರದ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮುಖಮಡರಾದ ದೇವರಾಜ ಕಂಬಳಿ, ವೆಂಕಟೇಶ ಸಗಬಾಲ, ಹಸೀನಾಬಾನು ಟಪಾಲವಾಲೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.