ಧಾರವಾಡ prajakiran.com : ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಪುಣ್ಯತಿಥಿ ನಿಮಿತ್ಯ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮಹಾತ್ಮ ಗಾಂಧೀಜಿ ಪುತ್ಥಳಿಯ ಹತ್ತಿರ ಶನಿವಾರ ಬೆಳಿಗ್ಗೆ 10 ರಿಂದ 5 ಗಂಟೆ ವರೆಗೆ ದೆಹಲಿ ರೈತರ ಪ್ರತಿಭಟನೆ ಬೆಂಬಲಿಸಿ ಮತ್ತು ರೈತರ ಮೇಲಿನ ಹಲ್ಲೆ ಖಂಡಿಸಿ ಪಕ್ಷಾತೀತ ರೈತ ಹಿತ ರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.
ಉಪವಾಸ ಸತ್ಯಾಗ್ರಹ ಬೆಂಬಲಿಸಿ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಎ.ಎಂ. ಖಾನ್ , ಬಿ.ಎನ್. ಪೂಜಾರ, ಶ್ರೀಶೈಲ ಗೌಡ ಪಾಟೀಲ ಕಮತರ, ಫಿರೋಜ್ ಖಾನ್ ಹವಾಲ್ದಾರ್, ಎನ್. ಕೆ. ಕಾಗಿನೆಲೆ, ಶಿವಾನಂದ ಹಾದಿಮನಿ ಸೇರಿದಂತೆ ಅನೇಕರು ಪಾಲ್ಗೊಂಡರು.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ರೈತರು ಬೆಳೆದ ಎಲ್ಲಾ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಸಿಗಲೇಬೇಕು. ಅದು ಸಿಗದಿದ್ದರೆ ರೈತರು ಬದುಕುವುದು ಕಷ್ಟಕರವಾಗಲಿದೆ. ಈ ಹಿನ್ನಲೆಯಲ್ಲಿ ರೈತರ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷಾತೀತ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ, ಕೇಂದ್ರದ ಬಿಜೆಪಿ ಸರಕಾರ ದೆಹಲಿ ರೈತರೊಂದಿಗೆ ನಡೆದುಕೊಂಡಿರುವ ರೀತಿ ಸರಿಯಿಲ್ಲ.
ದೇಶಕ್ಕೆ ಅನ್ನ ನೀಡುವ ರೈತರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು. ಹಠಮಾರಿ ಧೋರಣೆಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ಕಾನೂನನ್ನು ಜಾರಿಗೆ ತಂದು ಬಂಡವಾಳಶಾಹಿ ವ್ಯವಸ್ಥೆಯ ಬಲಪಡಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಹೀಗಾಗಿ ರೈತ ವಿರೋಧಿ ನೀತಿಖಂಡಿಸಿ ದೇಶ ವ್ಯಾಪ್ತಿ ಹೋರಾಟ ನಡೆಯುತ್ತಿದ್ದು, ಧಾರವಾಡದ ಜನತೆ ಕೂಡ ಪಕ್ಷಾತೀತವಾಗಿ ರೈತರ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ. ನಿರಂತರವಾಗಿ ಧರಣಿ, ಪ್ರತಿಭಟನೆ, ಟ್ರಾಕ್ಟರ್ ರ್ಯಾಲಿ, ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ನಗರದ ಶಾಸಕಿ ಸೌಮ್ಯ ರೆಡ್ಡಿ ಅವರ ಮೇಲೆ ಪ್ರಕರಣ ದಾಖಲಿಸಿರುವ ಸರಕಾರದ ಕ್ರಮವನ್ನು ಖಂಡಿಸಿದರು. ಶಾಸಕರ ಮಾಎಲೆ ಪ್ರಕರಣ ದಾಖಲಿಸಬೇಕಾದರೆ ಸಭಾಧ್ಯಕ್ಷರ ಪರವಾನಿಗೆ ಪಡೆಯಬೇಕು. ಈ ಪ್ರಕರಣದಲ್ಲಿ ಪೊಲೀಸ್ ನಡೆ ಪ್ರಶ್ನಿಸಿವಂತಾಗಿದೆ ಎಂದು ಕಿಡಿಕಾರಿದರು.
ಈ ಹಿನ್ನಲೆಯಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ರೈತರ ಮೇಲಿನ ಹಿಂಸೆ, ದೌರ್ಜನ್ಯ, ದರ್ಪದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಲಾಗುತ್ತಿದೆ ಎಂದು ಪಿ.ಎಚ್. ನೀರಲಕೇರಿ ತಿಳಿಸಿದರು. ರೈತ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ನಡೆಸುವ ಮೂಲಕ ಬಿಸಿ ತಾಕಿಸಲಾಗುತ್ತಿದೆ ಎಂದು ನೀರಲಕೇರಿ ಹೇಳಿದರು.
ಈ ಸಂದರ್ಭದಲ್ಲಿ ಶಾಕೀರ ಸನದಿ, ಮುತ್ತಣ್ಣ ಶಿವಳ್ಳಿ ಸೇರಿದಂತೆ ಅನೇಕರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಪಾಲ್ಗೊಂಡರು.