ಬೆಂಗಳೂರು prajakiran.com : ಕಳೆದ ನಾಲ್ಕು ದಿನಗಳಿಂದ ಅತಿಹೆಚ್ಚು ಸೋಂಕಿತರನ್ನು ಕಂಡಿದ್ದ ಕರುನಾಡು ಸೋಮವಾರ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಹಾಗೂ ಸಮಾಧಾನ ಪಡುವಂತಾಗಿದೆ.
ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 69 ಪ್ರಕರಣ ದೃಢಪಟ್ಟಿದ್ದು, ಸಾವಿನ ಸಂಖ್ಯೆ ಕೂಡ ಒಂದು ಏರಿಕೆಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ತಲುಪಿದೆ.
ಉಡುಪಿಯಲ್ಲಿ ಸೋಮವಾರ ಮತ್ತೇ 16 ಪ್ರಕರಣಗಳು ದೃಢಪಟ್ಟಿವೆ. ಉಡುಪಿಯ 14 ಜನರಿಗೆ ಮಹಾರಾಷ್ಟ್ರ ಹಾಗೂ ಮುಂಬೈ ಕಂಟಕ ಎದುರಾದರೆ, ದುಬೈನಿಂದ ಬಂದ ಇಬ್ಬರಿಗೆ ತಗುಲಿದೆ. ಆ ಮೂಲಕ ಉಡುಪಿ ಜಿಲ್ಲೆಯ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.
ಇನ್ನೂ ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯ 6 ಜನರಿಗೆ ಮಹಾಮಾರಿ ಕರೋನಾ ವಕ್ಕರಿಸಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ಕರಾವಳಿ ಭಾಗದ ದಕ್ಷಿಣ ಕನ್ನಡದಲ್ಲಿ ತಲಾ 3 ಪ್ರಕರಣ ಕಂಡುಬಂದಿವೆ.
ಇನ್ನೂ ಸಕ್ಕರೆ ನಾಡು ಮಂಡ್ಯ 2, ಚಿನ್ನ ಗಣಿ ಕೋಲಾರ ಜಿಲ್ಲೆಯಲ್ಲಿ 2, ಬೀದರ, ಬೆಳಗಾವಿ, ರಾಮನಗರ, ತುಮಕೂರು, ವಿಜಯಪುರ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿವೆ.
ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೇ 19ರಂದು ದಾಖಲಾಗಿದ್ದರು. ಆರು ದಿನಗಳಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದ 13 ವಲಸೆ ಕಾರ್ಮಿಕರಿಗೆ ಸೋಂಕು ಕಾಣಿಸಿಕೊಂಡಿದೆ. 14 ಪ್ರಕರಣಗಳಲ್ಲಿ ಚಿತ್ತಾಪುರದ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. ಒಂದು ಮಾತ್ರ ಕಲಬರುಗಿ ನಗರದವರಾಗಿದ್ದಾರೆ. ಇವರೆಲ್ಲಾ ಮಹಾರಾಷ್ಟ್ರ ನಂಟು ಹೊಂದಿದ್ದಾರೆ. ಆ ಮೂಲಕ ಜಿಲ್ಲೆಯ ಕರೋನಾ ಸೋಂಕಿತರ 155ಕ್ಕೆ ಏರಿಕೆಯಾಗಿದೆ.
ಯಾದಗಿರಿಯ ಕರೋನಾ ಕಂಟಕ ಮೂರನೇ ದಿನವೂ ಮುಂದುವರೆದಿದ್ದು, ಸೋಮವಾರ ಮತ್ತೆ ಯಾದಗಿರಿ ಜಿಲ್ಲೆಯಲ್ಲಿ 15 ಪ್ರಕರಣ ಬಂದಿವೆ.
ಮಂಡ್ಯದಲ್ಲಿ ಮತ್ತೇ ಅಟ್ಟಹಾಸ ಮುಂದುವರೆದಿದೆ. ಆ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 254ಕ್ಕೆ ಏರಿಕೆಯಾಗಿದೆ. ಅದೇ ರೀತಿ ವಿದ್ಯಾನಗರಿ ಧಾರವಾಡದಲ್ಲಿ 3 ಕೇಸ್ ಹೀಗೆ ಒಟ್ಟು, ಇವತ್ತು 69 ಕೇಸ್ ದೃಢಪಟ್ಟಿವೆ.
ಕರುನಾಡಿಗೆ ಇಂದು ಕೂಡ ಮಹಾರಾಷ್ಟ್ರ ಕಂಟಕ ತಗುಲಿದ್ದು, 69ರಲ್ಲಿ 51 ಕೇಸ್ ಮಹಾರಾಷ್ಟ್ರ ಹಾಗೂ ಮುಂಬೈ ನಂಟು ಹೊಂದಿವೆ.
ಕಳೆದ ಒಂಬತ್ತು ದಿನಗಳಲ್ಲಿ ಮಹಾಸ್ಪೋಟವಾಗುತ್ತಲೇ ಇದೆ. ಶೇ 80ರಷ್ಟು ಅಲ್ಲಿಯ ನಂಟು ಇದೆ. ಇವತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಆ ಮೂಲಕ ಒಟ್ಟು 680 ಜನ ಬಿಡುಗಡೆಗೊಂಡಂತಾಗಿದೆ. ಒಟ್ಟು ಸಕ್ರಿಯ 1433 ಪ್ರಕರಣಗಳಿವೆ. ಇವತ್ತಿನ 69 ಜನರಲ್ಲಿ 15 ಮಕ್ಕಳಿಗೆ ಸೋಂಕು ಬಂದಿದೆ.
ಬೆಳಗಾವಿಯಲ್ಲಿ 9, ಕಲಬರುಗಿಯಲ್ಲಿ 10 ಜನ ಗುಣಮುಖರಾಗಿ ಬಿಡುಗಡೆಗೊಂಡರೆ, ದಾವಣಗೆರೆ 4, ಹಾವೇರಿ, ಉತ್ತರಕನ್ನಡ, ವಿಜಯಪುರದಲ್ಲಿ ಒಬ್ಬರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.