ಲಾಕ್ಡೌನ್ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯ : ಜಿಲ್ಲಾಧಿಕಾರಿ ನಿತೇಶ ಪಾಟೀಲ
ಧಾರವಾಡ prajakiran. com : ಧಾರವಾಡ ಜಿಲ್ಲಾಡಳಿತ ಮೇ.22 ಮತ್ತು 23 ರಂದು ಜಾರಿ ಮಾಡಿದ್ದ ಲಾಕ್ಡೌನ್ ಗೆ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದಾರೆ. ಸರಕಾರದ ಆದೇಶದಂತೆ ನಾಳೆ ಮೇ.24 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 7 ರ ಬೆಳಿಗ್ಗೆ 6 ಗಂಟೆ ವರೆಗೆ ಜಿಲ್ಲೆಯಲ್ಲಿಯೂ ಲಾಕ್ಡೌನ್ ವಿಸ್ತರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಿರ್ಣಯದಂತೆ ಇನ್ನಷ್ಟು ಕಠಿಣ ನಿಯಮಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಭಾನುವಾರ ಸಂಜೆ ನಗರ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರೊಂದಿಗೆ ಧಾರವಾಡ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ವರ್ಚುವಲ್ (ಆನ್ಲೈನ್) ಮೂಲಕ ಸುದ್ಧಿಗೋಷ್ಠಿ ನಡೆಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಮೇ 22 ಮತ್ತು 23 ರಂದು ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಕೇವಲ ಹಾಲು, ಹಣ್ಣು, ತರಕಾರಿ ಖರೀದಿಸಲು ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಅವಕಾಶ ನೀಡಲಾಗಿತ್ತು
ಮತ್ತು ಆಸ್ಪತ್ರೆ, ಔಷಧಿ ಅಂಗಡಿ ತೆರೆಯಲು, ಸರಕು ಸಾಗಾಟ ವಾಹನ, ಅಂಬ್ಯುಲೆನ್ಸ್, ಕೊವೀಡ್ ಕರ್ತವ್ಯ ನಿರತ ಅಧಿಕಾರಿ, ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಅದರಂತೆ ನಾಳೆ ಮೇ 24 ರ ಬೆಳಿಗ್ಗೆ 6 ರಿಂದ ಜೂನ್ 7 ರ ಬೆಳಿಗ್ಗೆ 6 ರವರೆಗೆ ರಾಜ್ಯಾದಾದ್ಯಂತ ಲಾಕ್ಡೌನ್ ವಿಸ್ತರಿಸಲಾಗಿದ್ದು, ಜಿಲ್ಲೆಯಲ್ಲಿ ಲಾಕ್ಡೌನ್ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಇಂದು (ಮೇ.23) ಬೆಳಿಗ್ಗೆ ಸಭೆ ಜರುಗಿಸಲಾಯಿತು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪಿ. ಕೃಷ್ಣಕಾಂತ ಮತ್ತು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು.
ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಠಿಣ ಲಾಕ್ಡೌನ ಜಾರಿ ಕುರಿತು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ನಾಳೆಯಿಂದ ಲಾಕ್ಡೌನ್ ವಿಸ್ತರಣೆ ಆಗಿದ್ದು, ಪ್ರತಿದಿನ ಬೆಳಗ್ಗೆ 6 ರಿಂದ 8 ರ ವರೆಗೆ ಮಾತ್ರ ಹಾಲು, ತರಕಾರಿ, ಹಣ್ಣು ಖರೀದಿಗೆ ಅವಕಾಶವಿದೆ.
ಮೇ 27 ಮತ್ತು 28 ರಂದು ಮಾತ್ರ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಕಿರಾಣಿ, ಮೌಂಸದ ಅಂಗಡಿ ತೆರೆಯಲು ಅವಕಾಶವಿದೆ.
ಮಧ್ಯದ ಅಂಗಡಿ, ಹೊಟೇಲ ತೆರೆಯಲು ಹಾಗೂ ಪಾರ್ಸಲ್ ನೀಡಲು ಅವಕಾಶವಿಲ್ಲ.
ಅವು ಪೂರ್ಣ ಪ್ರಮಾಣದಲ್ಲಿ ಮುಚ್ಚಿರುತ್ತವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಜೂನ್ 7 ರ ವರೆಗೆ ಮದುವೆ, ಗೃಹ ಪ್ರವೇಶ, ಹುಟ್ಟು ಹಬ್ಬ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ.
ಅಗ್ರಿಕಲ್ಚರಲ್ ಪೆರಿಸೇಬಲ್ ವಸ್ತುಗಳ ಸಂಬAಧಿತ ಕೈಗಾರಿಕೆ, ರಕ್ಷಣಾ ಇಲಾಖೆಗೆ ಸರಕು ಪೂರೈಸುವ ಕೈಗಾರಿಗೆ, ನಿರಂತರ ಉಷ್ಣತೆ ಅಗತ್ಯವಿರುವ ಕೈಗಾರಿಕೆಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ.
ಅಂಬ್ಯುಲೆನ್ಸ್, ಕೊವೀಡ್ ಕರ್ತವ್ಯದಲ್ಲಿರುವ ಅಧಿಕಾರಿ ವಾಹನ, ಕರ್ತವ್ಯಕ್ಕೆ ನಿಯೋಜನೆಗೊಂಡ ವಾಹನ, ಮಾದ್ಯಮದವರು, ಬೆಳಿಗ್ಗೆ ಪತ್ರಿಕೆ ವಿತರಿಕರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು. ಅಧಿಕೃತ ಪಾಸ್ ಹಾಗೂ ಅನುಮತಿಸಲಾದ ತುರ್ತು ಕರ್ತವ್ಯದ ಬಗ್ಗೆ ಪೂರಕ ಸಾಕ್ಷö್ಯ ಹೊಂದಿರಬೇಕು ಎಂದು ಅವರು ತಿಳಿಸಿದರು.
ಎಲ್ಲ ಕಡೆ ಹೋಟೆಲ್ ಖಾನಾವಳಿ ಬಂದ್ ಇರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಮತ್ತು ರೋಗಿಯ ಸಹಾಯಕ್ಕೆ ಇರುವವರಿಗೆ ಮಾತ್ರ ಊಟ, ಉಪಹಾರಕ್ಕೆ ಅನುಕೂಲವಾಗಲು ಆಯಾ ಆಸ್ಪತ್ರೆಯ ಬಳಿ ಇರುವ ಮತ್ತು ಆಯಾ ಆಸ್ಪತ್ರೆಯವರು ಈ ಕುರಿತು ಅರ್ಜಿ ಸಲ್ಲಿಸಿದರೆ ಮಾತ್ರ ಒಂದು ಹೋಟೆಲ್ಗೆ ಅನುಮತಿ ನೀಡಲಾಗುವುದು.
ಆ ಹೋಟೆಲ್ನವರು ನಿಯಮ ಮೀರಿ ಸಾರ್ವಜನಿಕರಿಗೆ ಆಹಾರ ವಿತರಿಸಿದರೆ ಅದನ್ನು ಬಂದ್ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟಿನ್ಗಳಿದ್ದು ಅಲ್ಲಿಯೂ ಸಹ ಊಟ, ಉಪಹಾರ ವಿತರಿಸಲಾಗುತ್ತಿದೆ. ಅಗತ್ಯವಿರುವವರು ಇದರ ಉಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಅವಳಿ ನಗರದಲ್ಲಿ ಧಾರವಾಡ ಸಿದ್ಧೇಶ್ವರ ಕಾಲೋನಿ ಸೇರಿ ಒಟ್ಟು 5 ಕಂಟೈನ್ಮೆAಟ್ ಝೋನ್ಗಳನ್ನು ಮಾಡಲಾಗಿದೆ.
ಕಂಟೈನ್ಮೆAಟ್ ಝೋನ್ಗಳಲ್ಲಿ ಮಹಾನಗರ ಪಾಲಿಕೆ, ಪೊಲೀಸ, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯವಿರು ವ್ಯವಸ್ಥೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣವಿರುವವರು ಟೆಸ್ಟಿಂಗ್ಗೆ ಬಂದಾಗಲೇ ಅವರಿಗೆ ಔಷಧಿಕಿಟ್ ನೀಡಲು ತೀರ್ಮಾನಿಸಲಾಗಿದೆ.
ಆದಷ್ಟು ಬೇಗ ಎಲ್ಲ ಕೋವಿಡ್ ಟೆಸ್ಟಿಂಗ್ ವಾಹನಗಳಲ್ಲಿ ಕೊರೊನಾ ರೋಗ ನಿರೋಧಕ ಮಾತ್ರೆಗಳಿರುವ ಕಿಟ್ ಇಟ್ಟುಕೊಂಡು ಸೋಂಕಿನ ಲಕ್ಷಣ ಇರುವವರಿಗೆ ಸ್ಥಳದಲ್ಲಿ ನೀಡುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.