ಬಸವರಾಜ ಕೊರವರ, ನಾಗರಾಜ ಕಿರಣಗಿ ಬೆಡ್ ಮೇಲೆ ಮಲಗಿಯೇ ಹೋರಾಟ
358 ನೀರು ಸರಬರಾಜು ನೌಕರರ ಮರು ನೇಮಕಕ್ಕೆ ಬಿಗಿಪಟ್ಟು
ಧಾರವಾಡ ಪ್ರಜಾಕಿರಣ.ಕಾಮ್ : 358 ನೀರು ಸರಬರಾಜು ನೌಕರರ ಮರುನೇಮಕಕ್ಕೆ ಒತ್ತಾಯಿಸಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆಯುತ್ತಿರುವ ಅಮರಣ ಉಪವಾಸ ಸತ್ಯಾಗ್ರಹ ಮೂರನೇ ದಿನವೂ ಮುಂದುವರೆದಿದೆ.
ಪಾಲಿಕೆಯಲ್ಲಿ ರಫೀಕ್ ಪನಾರೆ, ಯಲ್ಲಪ್ಪ ಇಂಗನಹಳ್ಳಿ, ಶಂಕರಗೌಡ ಚನ್ನಗೌಡರ, ಬಸವರಾಜ ಮಠಪತಿ, ನಾಗರಾಜ ನಂದಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರು ಬಲವಂತವಾಗಿ ದಾಖಲು ಮಾಡಿರುವ ಬೆಡ್ ಮೇಲೆ ಮಲಗಿಯೇ ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ ಅವರು ವೈದ್ಯರ ಮನವಿಗೂ ಸ್ಪಂದಿಸದೆ ಮೂರನೇ ದಿನದ ಅಮರಣ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.
ಆರೋಗ್ಯದಲ್ಲಿ ಸುಧಾರಣೆ ಬರಬೇಕಾದರೆ ನೀರು ಸ್ವೀಕರಿಸಿ ಎಂದು ಸಲಹೆ ನೀಡಿದರೂ ಸೊಕ್ಕಿನ ಸರಕಾರಕ್ಕೆ ಹಕ್ಕಿನ ಉತ್ತರ ಉಪವಾಸ ಮುಂದುವರೆಸಿದ್ದಾರೆ.
ವೈದ್ಯರು ನಿನ್ನೆ ರಾತ್ರಿಯೇ ಹೆಚ್ಚಿನ ಚಿಕಿತ್ಸೆ ನೀಡಲು ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲು ಸಜ್ಜಾಗಿದ್ದರು. ಆದರೆ ಅದನ್ನು ಧಿಕ್ಕರಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿಯಿಡಿ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಿದ ಬಳಿಕ ಬುಧವಾರ ಬೆಳಗ್ಗೆ ಐಸಿಯು ವಾರ್ಡ್ ಗೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ.
ಜನಜಾಗೃತಿ ಸಂಘ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಅವಳಿನಗರದ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ವರೆಗೆ ಹಾಗೂ 358 ನೌಕರರ ಮರು ನೇಮಕ ಆಗುವರೆಗೆ ಅಮರಣ ಉಪವಾಸ ಸತ್ಯಾಗ್ರಹ ಕೈ ಬಿಡಲ್ಲ ಎಂದು ಸ್ಪಷ್ಟ ಪಡಿಸಿದರು.