ಧಾರವಾಡ prajakiran. com : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಳ ನುಗ್ಗಿದ ಕಳ್ಳರು ಚಿನ್ನ, ಬೆಳ್ಳಿ ಮತ್ತು ನಗದು ದೋಚಿದ ಪ್ರಕರಣ ಧಾರವಾಡದ ಯಾದವಾಡ ರಸ್ತೆಯಲ್ಲಿನ ಪತ್ರೇಶ್ವರ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶಾಲಾ ಶಿಕ್ಷಕಿ ಗೀತಾ ನಾಯ್ಕರ ಎನ್ನುವವರ ಮನೆಯೇ ಕಳ್ಳತನವಾಗಿದ್ದು, ಮನೆಯಲ್ಲಿಡಲಾಗಿದ್ದ ೧.೫೦ ಲಕ್ಷ ರೂಪಾಯಿ ನಗದು, ೨೫೦ ಗ್ರಾಂ ಬಂಗಾರ ಹಾಗೂ ೨.೫ ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ.
ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆ ಗೀತಾ ನಾಯ್ಕರ್ ಕುಟುಂಬದವರು ನಿನ್ನೆ ರಾತ್ರಿ ತೆರಳಿದ್ದರು.
ಕಾಯಕ್ರಮ ಮುಗಿಸಿಕೊಂಡು ಬೆಳಗ್ಗೆ ಬಂದು ನೋಡಿದಾಗ ಕಳ್ಳತನವಾಗಿದ್ದು ಗೊತ್ತಾಗಿದೆ.
ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿ, ಅಲ್ಮೇರಾದಲ್ಲಿ ಇಡಲಾಗಿದ್ದ ಚಿನ್ನ, ಬೆಳ್ಳಿ ಆಭರಣ ಮತ್ತು ಹಣವನ್ನು ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಆರ್.ಬಿ.ಬಸರಗಿ, ಎಸಿಪಿ ಅನುಷಾ ಜಿ., ಇನ್ಸಪೆಕ್ಟರಗಳಾದ ರಮೇಶ ಹೂಗಾರ, ಸಂಗಮೇಶ ದಿಡಿಗನಾಳ, ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಮೇತ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.