ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಧಾರವಾಡ ಪಶ್ಚಿಮ ಶಾಸಕ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ವಿರುದ್ದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೆಚ್ಚಳ ಮಾಡಿಸುವುದು ಅವರೇ ಹಾಗೂ ಆನಂತರ ಕಡಿಮೆ ಮಾಡಿಸಿದ್ದೇವೆ ಎಂದು ತಮ್ಮ ಬೆನ್ನು ತಾವೆ ಚೆಪ್ಪರಿಸಿಕೊಳ್ಳುವುದು ನಾಚಿಕಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡಿದದಿದ್ದರೆ ಕೇಂದ್ರ ಸರಕಾರ ಅನುದಾನ ನೀಡುವುದಿಲ್ಲ ಎಂದು ಜನರ ದಾರಿ ತಪ್ಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಕರೋನಾ ಲಾಕ್ ಡೌನ್ ನಿಂದ ನಲುಗಿ ಹೋಗಿರುವ ದೇಶದ ಜನತೆಗಾಗಿ ಕೇಂದ್ರ ಸರಕಾರ ತೆರಿಗೆ ಹೊರೆ ಕಡಿಮೆ ಮಾಡಿದೆ. ರಾಜ್ಯ ಸರಕಾರ ಕೂಡ ಪ್ಯಾಕೇಜ್ ಘೋಷಿಸಿದೆ.
ತಮ್ಮದೇ ನಾಯಕರಿಗೆ ಮನವರಿಕೆ ಮಾಡಿಕೊಡುವುದು ಬಿಟ್ಟು ಪತ್ರಿಕಾ ಹೇಳಿಕೆಯಲ್ಲಿ ಕಾಲ ಕಳೆಯುವುದು ಅವರಿಗೆ ಶೋಭೆ ಕೊಡುವುದಿಲ್ಲ ಎಂದು ಗುಡುಗಿದ್ದಾರೆ.
ಜನರ ಸಂಕಷ್ಟದ ಅರಿವೇ ಇಲ್ಲದಂತೆ ಮಾತನಾಡುವುದು, ಹಾಗೂ ಅದರ ನಡುವೆಯೂ ತೆರಿಗೆ ಹೆಚ್ಚಳ ಮಾಡವುದು ಅನಿವಾರ್ಯ ಎಂದು ಹೇಳಿರುವುದು ನೋಡಿದರೆ ಅವರಿಗೆ ಜನರಿಗೆ ಹೊರೆ ಯಾದರೂ ಪರವಾಗಿಲ್ಲ.
ಆದಾಯವೇ ಮುಖ್ಯ ಎಂಬಂತಾಗಿದೆ. ಧಾರವಾಡ ಹಾಗೂ ಹುಬ್ಬಳ್ಳಿ ಮತದಾರರ ಹಿತವನ್ನು ಬಲಿಕೊಟ್ಟು ತೆರಿಗೆ ಹೆಚ್ಚಳ ಪರ ಮಾತನಾಡುವುದು ನೋವಿನ ಸಂಗತಿ.
ಶೇ 20ರಷ್ಟು ಇದ್ದ ವಾಸದ ಕಟ್ಟಡ ತೆರಿಗೆ ಶೇ 15ಕ್ಕೆ ಇಳಿಸಿರುವುದೇ ಸಾಧನೆಯಲ್ಲ. ಅದನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳಬೇಕು.
ಇಲ್ಲದಿದ್ದರೆ ಬರುವ ದಿನಗಳಲ್ಲಿ ಜನತೆಯೊಂದಿಗೆ ಬೀದಿಗಿಳಿದು ಹೋರಾಟ ನಡೆಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಎಚ್ಚರಿಸಿದ್ದಾರೆ.
1995ರ ಪೌರಾಡಳಿತ ತಿದ್ದುಪಡಿ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳು ಮೂರು ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳಕ್ಕೆ ಅವಕಾಶವಿದೆ. ಆದರೆ ಅದು ಕಡ್ಡಾಯವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಆದರೆ ಅಧಿಕಾರಿಗಳು ಅದನ್ನು ಮರೆಮಾಚುವುದು ಸರಿಯಲ್ಲ. ಇದು ಜನರಿಗೆ ಗಾಯದಮೇಲೆ ಬರೆ ಎಳೆದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರಿಂದ ಜನರಿಗಾಗಿ, ಜನರಿಗೋಸ್ಕರ ಪಾಲಿಕೆಯಿದೆಯೇ ಹೊರತು ಪಾಲಿಕೆಗಾಗಿ ಜನರಿಲ್ಲ ಎಂಬ ವಾಸ್ತವಾಂಶವನ್ನು ಆಡಳಿತ ನಡೆಸುವರು ಮರೆತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕುಟುಕಿದ್ದಾರೆ.