ಧಾರವಾಡ prajakiran.com : ಲಾರಿಯೊಂದರಲ್ಲಿ ಮಹಾರಾಷ್ಟ್ರದಿಂದ ರಾಯಘಡ್ ಗೆ ತೆರಳುತ್ತಿದ್ದ 66 ವಲಸೆ ಕಾರ್ಮಿಕರನ್ನು ತಡೆ ಹಿಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಮಂಗಳವಾರ ಬೆಳ್ಳಗೆ ನಡೆದಿದೆ.
ಧಾರವಾಡ ಜಿಲ್ಲೆಯ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಅವರನ್ನು ತಡೆ ಹಿಡಿದು ವಿಚಾರಣೆಗೊಳಪಡಿಸಿದಾಗ ಈ ಮಾಹಿತಿ ಹೊರಬಿದ್ದಿದೆ.
ತಕ್ಷಣ ಅವರನ್ನು ಸ್ಥಳೀಯ ಕಲ್ಯಾಣಮಂಟಪದಲ್ಲಿ ಧಾರವಾಡ ಜಿಲ್ಲಾಡಳಿತ ಆರಂಭಿಸಿರುವ ಕ್ವಾರಂಟೆನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
ಈ ಸಂಬಂಧ ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿ, ಆತನ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಅಲ್ಲದೆ, ಲಾರಿ, ಟ್ರಕ್ ಹಾಗೂ ಕಂಟೇನರ್ ಚಾಲಕರು ಹೀಗೆ ಪ್ರಯಾಣಿಕರನ್ನು ಅಕ್ರಮವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗದಂತೆ ಮನವಿ ಮಾಡಿದ್ದಾರೆ. ವಾಹನಗಳಲ್ಲಿ
ಕೇವಲ ಸರಕು, ಸರಂಜಾಮು ಸಾಗಾಟಕ್ಕೆ ಅವಕಾಶವಿದ್ದು, ಪ್ರಯಾಣಿಕರ ಸಾಗಾಟಕ್ಕಾಗಿ ಇಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಹಣದಾಸೆಗೆ ಮಾನವ ಸಾಗಾಣಿಕೆ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಎಚ್ಚರಿಸಿದ್ದಾರೆ.