ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು prajakiran. com ಆಗಸ್ಟ್ 12 :ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದರು.
ಶಿವಮೊಗ್ಗ ಸುಬ್ಬಣ್ಣ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಹಾಗೂ ಹಿರಿಯ ಕಲಾವಿದರು. ಶಿವಮೊಗ್ಗ ಸುಬ್ಬಣ್ಣ ಅವರ ನಿಧನ ದು:ಖ ತಂದಿದೆ. ಅವರ ಸಾಧನೆ ಬಹಳ ದೊಡ್ಡದು.
ವಿಶೇಷವಾಗಿ ಕನ್ನಡದ ಎಲ್ಲಾ ಕವಿಗಳ ಹಾಡುಗಳನ್ನು ಹಾಡಿ, ಅವು ಪ್ರಸಿದ್ಧವಾಗಲು ಕಾರಣೀಭೂತರಾಗಿದ್ದಾರೆ. ಆ ಹಾಡುಗಳಿಗೆ ಜೀವಕಳೆಯನ್ನು ತುಂಬಿದ್ದಾರೆ.
ಅವರು ಸದಾ ಲವಲವಿಕೆಯಿಂದ ಇದ್ದವರು. ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ನನ್ನೊಂದಿಗೆ ವಿಶೇಷ ಪ್ರೀತಿಯ ಸಂಬಂಧ ಹೊಂದಿದ್ದರು.
ಶಿಶುನಾಳ ಶರೀಫರ ಹಾಡುಗಳನ್ನು ಹಾಡುವ ಮೂಲಕ ನನ್ನ ಮತ್ತು ಸುಬ್ಬಣ್ಣ ಅವರ ಬಾಂಧವ್ಯ ಗಟ್ಟಿಯಾಗಿತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
*ಸುಬ್ಬಣ್ಣ ಅವರ ಪರಂಪರೆ ಮುಂದುವರೆಯಬೇಕು*
ಅವರ ಅಗಲಿಕೆ ಕರ್ನಾಟಕದ ಕಲಾಲೋಕಕ್ಕೆ ತುಂಬಲಾರದ ನಷ್ಟ. ಅವರ ಅನಿರೀಕ್ಷಿತ ಸಾವಿನಿಂದ ಆಘಾತವಾಗಿದೆ.
ಸುಬ್ಬಣ್ಣ ಅವರು ಸಂಗೀತದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಎಂಥ ಕಷ್ಟಕರವಾದ ಸಂಗೀತವನ್ನೂ ಸರಳ, ಸುಲಭವಾಗಿ ಹಾಡುವ ಕಲೆ ಕರ್ನಾಟಕದ ಎಲ್ಲಾ ಕಲಾವಿದರಿಗೆ ತೋರಿಸಿಕೊಟ್ಟಿದ್ದಾರೆ.
ನವ ಕಲಾವಿದರಿಗೆ ಬಿಟ್ಟುಕೊಟ್ಟು ಹೋಗಿರುವ ಪರಂಪರೆ ಮುಂದುವರೆಯಬೇಕು ಎನ್ನುವುದು ನಮ್ಮ ಆಸೆ. ಇದನ್ನು ಮುಂದುವರೆಸಲು ಅವರ ಸ್ಮಾರಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದೇನೆ.
ಶಿವಮೊಗ್ಗ ಸುಬ್ಬಣ್ಣ ಅವರ ಹಾಡುಗಾರಿಕೆ, ಸಂಗೀತದಲ್ಲಿ ನಿರಂತರವಾಗಿ ಜೀವಿಸುತ್ತಾರೆ. ಅದು ನಮ್ಮ ಕರ್ನಾಟಕದ ನವ ಪೀಳಿಗೆಗೆ ದೊಡ್ಡ ಪ್ರೇರಣಾ ಶಕ್ತಿಯಾಗಿ ಅವರು ಉಳಿಯಲಿದ್ದಾರೆ.
ದು:ಖ ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.