ಧಾರವಾಡ prajakiran.com : ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಯುವಕನಿಗೆ ಚಾಕು ಇರಿದ ಘಟನೆ ಧಾರವಾಡದಲ್ಲಿ ಗುರುವಾರ ಸಂಜೆ ನಡೆದಿದೆ.
ಧಾರವಾಡದ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಪ್ತಾಪುರ ಬಾವಿ ಹತ್ತಿರ ಇರುವ ದುರ್ಗ ಹೋಟೆಲ್ ಬಳಿ ಸಾಯಂಕಾಲ 7 ಗಂಟೆ ಸುಮಾರಿಗೆ ಕಾಂತೇಶ್ ತಂದೆ ಕೃಷ್ಣ ಲಮಾಣಿ (19) ಎಂಬ ವಿದ್ಯಾರ್ಥಿ ಗೆ ಚಾಕು ಇರಿಯಲಾಗಿದೆ.
ಇತ ಧಾರವಾಡದ ಲಕ್ಷ್ಮಿ ಸಿಂಗನ ಕೆರೆ ನಿವಾಸಿ ಎಂದು ತಿಳಿದುಬಂದಿದೆ. ಈತನಿಗೆ ಹಣಕಾಸಿನ ವಿಚಾರವಾಗಿ ದರ್ಶನ, ಈರಣ್ಣ ಪಾಟೀಲ ಸೇರಿದಂತೆ ಹಲವರು ಕೂಡಿಕೊಂಡು ಕಾಂತೇಶನ ಕುತ್ತಿಗೆಯ ಬಲಭಾಗಕ್ಕೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ.
ಇದೇ ವೇಳೆ ಕಾಂತೇಶನ ಜೊತೆಗಿದ್ದ ರಿತೇಶ ಮಹಾಲಯನಿಗೂ ಕೂಡಾ ಸ್ವಲ್ಪ ಗಾಯಗಳಾಗಿವೆ.ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೀಗಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಕರಣ ದಾಖಲು ಮಾಡಿಕೊಂಡು, ಧಾರವಾಡದ ಉಪನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.