ಬೆಂಗಳೂರು prajakiran.com : ಟ್ರಿಲಿಯನರ್ ಮೈಂಡ್ಸ್ ಕಂಪನಿ ಹೆಸರಿನಲ್ಲಿ ಚೈನ್ ಲಿಂಕ್ ದಂಧೆ ನಡೆಸುತ್ತಿದ್ದ ಕ್ರಿಮಿನಲ್ ಮೈಂಡ್ ಸಂದೇಶ್ ಶೆಟ್ಟಿಯನ್ನು ಬೆಂಗಳೂರಿನ ಸುಬ್ರಮಣ್ಯ ನಗರ ಠಾಣೆಯ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಜ. 5 ರಂದು ರಾತ್ರಿ 11 ಗಂಟೆಗೆ ಸೆರೆ ಹಿಡಿದು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವಂಚಕನು ಸಾಕಷ್ಟು ದಿನಗಳಿಂದ ತಲೆ ಮರೆಸಿಕೊಂಡಿದ್ದು ಬೆಂಗಳೂರಿಗೆ ಕಾಲಿಟ್ಟ ತಕ್ಷಣವೇ ಆತನಿಗೆ ಖೆಡ್ಡಾ ತೋಡಿದ್ದಾರೆ.
ಈತ ಅಮಾಯಕ ನಿರುದ್ಯೋಗಿ ಯುವಕರನ್ನೇ ಟಾರ್ಗೆಟ್ ಮಾಡಿ ಜನರಿಂದ ಹಣ ಪಡೆದು, ನಿಮಗೆ ಕೊಟ್ಟ ಹಣಕ್ಕೆ ಪ್ರಾಡಕ್ಟ್ ಕೊಡುತ್ತೇನೆ ಎಂದು ನಂಬಿಸಿ ಸಾಕಷ್ಟು ಜನರಿಗೆ ಪ್ರಾಡಕ್ಟ್ ಕೂಡ ಕೊಡದೆ, ಇನ್ನೂ ಕೆಲವರಿಗೆ ಮೌಲ್ಯವಿಲ್ಲದ ಪ್ರಾಡಕ್ಟ್ ಕೊಟ್ಟು ಮೋಸ ಮಾಡಿದ್ದಾನೆ.
ಹಾಗೆಯೇ ಜನ ಸೇರಿಸಿ, ಚೈನ್ ಬೆಳೆಸಿದರೆ ಕಮಿಷನ್ ಕೊಡುತ್ತೇನೆಂದು ನಂಬಿಸಿ ಸಾಕಷ್ಟು ಜನರಿಗೆ ಕಮಿಷನ್ ಕೂಡ ಕೊಡದೆ ವಂಚಿಸಿದ್ದ.
ಹಣ ವಾಪಸು ಕೇಳಿದ ಜನರಿಗೆ ರೌಡಿಗಳಿಂದ ಬೆದರಿಕೆ ಹಾಕಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಈತ ಇಲ್ಲಿಯ ತನಕ ಸಾವಿರಾರು ಜನರನ್ನು ವಂಚಿಸಿ ಕೋಟಿಗಟ್ಟಲೆ ಹಣ ತೆಗೆದುಕೊಂಡಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀವೂ ಹಣ ಕಳೆದುಕೊಂಡಿದ್ದರೆ ತಕ್ಷಣವೇ ಬೆಂಗಳೂರಿನ ಸುಬ್ರಮಣ್ಯ ನಗರ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.