ಬೆಂಗಳೂರು prajakiran.com : ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕರೋನಾ ನಿಯಂತ್ರಣ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟರ್ ಮೂಲಕ ಟಾಂಗ್ ನೀಡಿದ್ದಾರೆ.
ಅದರಲ್ಲೂ ಆರೋಗ್ಯ ಸಚಿವರ ಆಪ್ತ, ಕುಚುಕು ಗೆಳೆಯ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಹೆಸರನ್ನು ಉಲ್ಲೇಖಿಸದೆ ಟಾಂಗ್ ನೀಡಿರವುದು ಗಮನಾರ್ಹವಾಗಿದೆ.
ಸಿದ್ದರಾಮಯ್ಯ ಅವರ ಟ್ವೀಟ್ ಹೀಗಿದೆ.
ರಾಜ್ಯದ ಜನರನ್ನು ಈಗ ಕಾಪಾಡುತ್ತಿರುವುದೇ ದೇವರು, ಸರ್ಕಾರ ಅಲ್ಲ. ಆದರೆ…. ಜನದ್ರೋಹಿಗಳನ್ನು, ಭ್ರಷ್ಟರನ್ನು ದೇವರೂ ಕಾಪಾಡಲಾರ.
ಆ ನಿರೀಕ್ಷೆ ಬೇಡ… ಚಿನ್ನದ ಕಿರೀಟ ಅರ್ಪಿಸಿದರೂ ಜೈಲಿಗೆ ಹೋಗುವುದನ್ನು ತಿರುಪತಿ ತಿಮ್ಮಪ್ಪ ತಪ್ಪಿಸಲಿಲ್ಲ ಎಂದು ಕುಟುಕಿದ್ದಾರೆ.
ಈ ಹಿಂದೆ ಮಾಜಿ ಸಚಿವ ತಿರುಪತಿ ತಿಮ್ಮಪ್ಪನಿಗೆ ಕಿರೀಟ ಸಮರ್ಪಿಸಿದ್ದರು. ಆದರೂ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದರು.
ಅವರ ವಿರುದ್ದ ಹಿಂದೆ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ, ಆಡಳಿತ ಚುಕ್ಕಾಣಿ ಹಿಡಿದಿದ್ದರು ಎಂಬುದು ಇಲ್ಲಿ ಸ್ಮರಿಸಬಹುದು.