ಇನ್ನು ಹತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣ ಮಾಡುತ್ತೇನೆ ಎಂದ ಶೆಟ್ಟರ್
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಈ ಬಾರಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಕೈ ತಪ್ಪುವ ಸಾಧ್ಯತೆಗಳು ದಟ್ಟವಾಗಿವೆ.
ಈಗಾಗಲೇ ಪಕ್ಷದ ವರಿಷ್ಠರು ದೂರವಾಣಿ ಮೂಲಕ ವಿಷಯ ಖಚಿತಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾತನಾಡಿ ವರಿಷ್ಠರ ಜೊತೆಗೆ ಮಾತುಕತೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೆ, ನಾನು ಇನ್ನು ಹತ್ತು ವರ್ಷಗಳ ಕಾಲ ಸಕ್ರಿಯ ರಾಜಕಾರಣ ಮಾಡುತ್ತೇನೆ. ನೂರಾರು ಜನರಿಗೆ ಟಿಕೇಟ್ ಕೊಡಿಸಿದ್ದೇನೆ. ಮೂವತ್ತು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೇಳಿದರು.
ಶೆಟ್ಟರ್ ಅವರಿಗೆ ಪಕ್ಷದ ಟಿಕೇಟ್ ಕೈ ತಪ್ಪುವ ಮಾಹಿತಿಯನ್ನು ಅರಿಯುತ್ತಿದ್ದಂತೆ ನೂರಾರು ಮುಖಂಡರು ಅವರ ನಿವಾಸಕ್ಕೆ ದೌಡಾಯಿಸಿದರು. ಅಲ್ಲದೆ, ಪಕ್ಷದ ಸದಸ್ಯತ್ವಕ್ಕೆ ಹಾಗೂ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಘೋಷಣೆ ಮಾಡುವ ಬೆದರಿಕೆ ಹಾಕಿದರು.
ಇದೇವೇಳೆ ಪಕ್ಷದ ನಕಲಿ ಲೇಟರ್ ಹೆಡ್ ನಲ್ಲಿ ಶೆಟ್ಟರ್ ಅವರ ರಾಜೀನಾಮೆ ಪತ್ರ ಹರಿದಾಡುತ್ತಿದ್ದು, ಅದು ಶುದ್ದ ಸುಳ್ಳು. ನಾನು ರಾಜೀನಾಮೆ ನೀಡಿಲ್ಲ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.