ಸೆ.5 ರ ಸಂಜೆ 6 ಗಂಟೆಯಿಂದ ಸೆ.6 ರ ಸಂಜೆ 7 ಗಂಟೆವರೆಗೆ ಪ್ರತಿಬಂಧಕಾಜ್ಞೆ ಜಾರಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ*
ಧಾರವಾಡ prajakiran. com ಸೆ.05: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ನಾಳೆ (ಸೆಪ್ಟೆಂಬರ 6 ರಂದು) ಬೆಳಿಗ್ಗೆ 8 ಗಂಟೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಧಾರವಾಡ ತಾಲೂಕು ಹುಬ್ಬಳ್ಳಿ ತಾಲೂಕು ಮತ್ತು ಹುಬ್ಬಳ್ಳಿ ನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಸಿಆರ್ಪಿಸಿ 1973 ಕಲಂ 144 ರನ್ವಯ ಸೆಪ್ಟೆಂಬರ್ 5 ರ ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ, ಸೆಪ್ಟೆಂಬರ್ 6ರ ಸಾಯಂಕಾಲ 7 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸೆ. 6ರ ಮತ ಎಣಿಕೆ ಸಂದರ್ಭದಲ್ಲಿ ಅಥವಾ ಮತಗಳ ಎಣಿಕೆ ಕಾರ್ಯದ ಮುಕ್ತಾಯದ ನಂತರ ಹಾಗೂ ಫಲಿತಾಂಶ ಘೋಷಣೆಯಾದ ತರುವಾಯ ವಿಜಯಶಾಲಿಯಾದ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂಭವಗಳಿದ್ದು ಮತ್ತು ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಿಜಯಶಾಲಿ ಅಭ್ಯರ್ಥಿಯ ಕಾರ್ಯಕರ್ತರು ಮತ್ತು ಬೆಂಬಲಿಗರ ಮಧ್ಯೆ ವೈಮನಸ್ಸು, ಜಗಳ ಮತ್ತು ಘರ್ಷಣೆಗಳು ಜರುಗದಂತೆ ಮುಂಜಾಗೃತಾ ಕ್ರಮವಾಗಿ ಮತ್ತು ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತಿಯ ದಂಡ ಸಹಿಂತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶದಲ್ಲಿ ತಿಳಿಸಿದ್ದಾರೆ.