ಧಾರವಾಡ prajakiran.com : ನಗರದಲ್ಲಿಯೇ ಕೇಂದ್ರ ಸ್ಥಾನ ಹೊಂದಿರುವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ತರಬೇತಿ ಸಂಸ್ಥೆಯಾಗಿರುವ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಆಶ್ರಯದಲ್ಲಿ ‘ರಚನಾವಾದ’ ಕುರಿತು ಇಲಾಖಾ ಅಧಿಕಾರಿಗಳಿಗೆ ಆನ್ಲೈನ್ ತರಬೇತಿ ಜರುಗಿತು.
ಕೋವಿಡ್-೧೯ ಹಿನ್ನೆಲೆಯಲ್ಲಿ ಮುಖಾಮುಖಿ ತರಬೇತಿ ಹಮ್ಮಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಪ್ರಸ್ತುತ ಗೂಗಲ್ ಮೀಟ್ ಆಪ್ ಬಳಕೆ ಮಾಡಿಕೊಂಡು ಆನ್ಲೈನ್ ಮೂಲಕ ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು, ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದಲ್ಲಿಯ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿ.ಆರ್.ಸಿ.) ಸಮನ್ವಯಾಧಿಕಾರಿಗಳಿಗೆ ಈ ತರಬೇತಿ ನೀಡಲಾಯಿತು.
ತರಬೇತಿಯ ಆರಂಭದಲ್ಲಿ ಸಿಸ್ಲೆಪ್ನ ನಿರ್ದೇಶಕ ಬಿ. ಎಸ್. ರಘುವೀರ ಮಾತನಾಡಿ, ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವ ಅಗತ್ಯತೆಯನ್ನು ರಚನಾವಾದ ತಿಳಿಸುತ್ತದೆ.
ಶಾಲಾ ಮೇಲ್ವಿಚಾರಕರು ವಿಸ್ತೃತ ಜ್ಞಾನವನ್ನು ಹೊಂದಿ ಶಿಕ್ಷಕರನ್ನು ಸಂಪನ್ಮೂಲಭರಿತನ್ನಾಗಿ ಮಾಡುವಲ್ಲಿ ಮೇಲ್ವಿಚಾರಕರ ಪಾತ್ರ ಬಹುಮುಖ್ಯ. ಈ ನಿಟ್ಟಿನಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳು ಶೈಕ್ಷಣಿಕ ತರಬೇತಿಗಳನ್ನು ತಮ್ಮ ಹಂತದಲ್ಲಿಯೂ ಏರ್ಪಡಿಸಬೇಕು ಎಂದರು.
ತರಬೇತಿಯ ನೋಡಲ್ ಅಧಿಕಾರಿ, ಸಿಸ್ಲೆಪ್ನ ಸಹಾಯಕ ನಿರ್ದೇಶಕ ಮಹಾವೀರ ಹಂಚಿನಾಳ ‘ರಚನಾವಾದ’ದ ಪ್ರಮುಖ ಸಂಗತಿಗಳ ಕುರಿತು ಚರ್ಚಿಸಿದರು.
ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ ಬಾರಾಟಕ್ಕೆ, ಉಪನ್ಯಾಸಕಿಯರುಗಳಾದ ಸುಜಾತಾ ತಿಮ್ಮಾಪೂರ, ಸ್ವರೂಪಶೀಲಾ, ಲಕ್ಷಿö್ಮ ಭಗವತಿ ಆನ್ಲೈನ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ, ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಿಗೆ ಇಂತಹದೇ ತರಬೇತಿಯನ್ನು ನೀಡಲಾಗಿದೆ ಎಂದು ಸಿಸ್ಲೆಪ್-ಕರ್ನಾಟಕ ಸಂಸ್ಥೆಯ ತಿಳಿಸಿದೆ.