ಬೆಂಗಳೂರು prajakiran.com : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಅವರ ಬದಲಾವಣೆಯ ಕೂಗು ಕೇಳಿ ಬಂದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಬದಲಾಗಿದೆ.
ಕಳೆದ ಹಲವು ತಿಂಗಳಿಂದ ಜಗದೀಶ ಶೆಟ್ಟರ್ ಅವರ ಕಡೆಯಿದ್ದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಇದೀಗ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪಾಲಾಗಿದೆ.
ಆ ಮೂಲಕ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲಾ ರಾಜಕಾರಣಕ್ಕೆ ಚುರುಕು ಮುಟ್ಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಶಾಸಕ ಉಮೇಶ ಕತ್ತಿ ಬಂಡಾಯವೆದ್ದ ಬೆನ್ನಲ್ಲೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಉತ್ತರಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.
ಇತ್ತೀಚೆಗಷ್ಟೇ ನಡೆದ ಬಂಡಾಯ ಶಾಸಕರ ಸಭೆಯಲ್ಲಿ ಮಾಜಿ ಸಿಎಂ ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೆಸರು ಮತ್ತೋಮ್ಮೆ ಮುಖ್ಯಮಂತ್ರಿ ಹುದ್ದೆಗೆ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಸಿಎಂ ಬಿ.ಎಸ್. ಯಡಿಯೂರಪ್ಪಬದಲಿಸಿ, ಅವರ ಸ್ಥಾನಕ್ಕೆ ರಮೇಶ ಜಾರಕಿಹೊಳಿಯವರನ್ನು ತಂದು ಕೂಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನ ಕೂಡ ಬದಲಾಗಿದ್ದು, ಜೆ.ಸಿ, ಮಾಧುಸ್ವಾಮಿ ಬಳಿಯಿದ್ದ ಉಸ್ತುವಾರಿ ಹೊಣೆಯನ್ನು ಕೆ. ಗೋಪಾಲಯ್ಯಅವರಿಗೆ ನೀಡಲಾಗಿದೆ.
ಕೆ. ಗೋಪಾಲಯ್ಯ ಈ ಹಿಂದೆ ಬೆಂಗಳೂರಿನ ಮಹಾಲಕ್ಷ್ಮಿಪುರಂ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕರಾಗಿದ್ದರು. ಆನಂತರ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
ಇದೀಗ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಿರುವುದು ಕೂಡ ತೀವ್ರ ಕುತೂಹಲ ಕೆರಳಿಸಿದೆ.