ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಭಾರತೀಯ ಜನತಾ ಪಕ್ಷದ ನಾಯಕರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊನೆಗೂ ನಿರೀಕ್ಷೆಯಂತೆ ಬಿಜೆಪಿಗೆ ವಿದಾಯ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಜಗದೀಶ್ ಶೆಟ್ಟರ್ ಅವರ ಮನವೊಲಿಕೆ ವಿಫಲವಾಗಿದ್ದು, ಕೇಂದ್ರ ನಾಯಕರು ತಮಗೆ ಕೊನೆಕ್ಷಣದವರೆಗೆ ಗೌರವಯುತವಾಗಿ ನಡೆಸಿಕೊಳ್ಳದೆ, ಉಸಿರುಗಟ್ಟುವ ವಾತವರಣದಲ್ಲಿ ಇದ್ದೆ.
ಹೀಗಾಗಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ಬಯಸಿದ್ದೇನೆ ಎಂದು ಪ್ರಕಟಿಸಿದರು.
ಹುಬ್ಬಳ್ಳಿಯಿಂದ ಶಿರಸಿಗೆ ಪ್ರಯಾಣ ಬೆಳೆಸಿದ ಅವರು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲು ತೆರಳಿದರು.
ಪಕ್ಷದ ಹಿರಿಯ ನಾಯಕರಾದ ಎಸ್. ಐ. ಚಿಕ್ಕನಗೌಡರ, ತವನಪ್ಪ ಅಷ್ಟಗಿ ಹಾಗೂ ಅನೇಕ ನಾಯಕರು ಅಸಮಾಧಾನ ಹೊಂದಿದ್ದಾರೆ.
ಆದರೆ ಯಾರಿಗೂ ಕನಿಷ್ಟ ಸೌಜನ್ಯಕ್ಕಾದರೂ ಮಾತನಾಡಿಸಲಿಲ್ಲ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಲಿಂಗಾಯತ ಸಮುದಾಯದ ಮೇಲೆ ಕೆಲವರು ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ನಾನು ಐಟಿ, ಇಡಿಗೆ ಹೆದರುವ ಅಗತ್ಯ ಇಲ್ಲ. ಎಲ್ಲವೂ ಕಾನೂನು ಬದ್ದವಾಗಿದ್ದೇನೆ.
ಹೀಗಾಗಿ ನಾನು ಧೈರ್ಯದಿಂದ ಹೊರಬಂದಿದ್ದೇನೆ ಎಂದು ಜಗದೀಶ್ ಶೆಟ್ಟರ್ ವಿವರಿಸಿದರು.
ಮುಂದಿನ ನಡೆ ಕುರಿತು ರಾಜೀನಾಮೆ ನೀಡಿದ ಬಳಿಕ ಬಂದು ಹಿತೈಷಿಗಳು ಹಾಗೂ ಅಭಿಮಾನಿಗಳ ಮುಂದೆ ಚರ್ಚಿಸಿ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಈ ವಿಷಯ ನರೇಂದ್ರ ಮೋದಿಯವರ ಹಾಗೂ ಅಮಿತ್ ಶಾ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ.
ರಾಜ್ಯದ ಉಸ್ತುವಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಇಚ್ಚೆ ಕಾಣಿಸುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಶೆಟ್ಟರ್ ಅವರ ಜೊತೆಯಲ್ಲಿ ತವನಪ್ಪ ಅಷ್ಟಗಿ, ಎಸ್. ಐ. ಚಿಕ್ಕನಗೌಡರ, ಮಲ್ಲಿಕಾರ್ಜುನ ಸಾಹುಕಾರ್, ನಾಗೇಶ ಕಲಬುರಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದರು