ಧಾರವಾಡ prajakiran.com : ಬಾವಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ರಕ್ಷಣೆ ಮಾಡಿದ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಈ ರಕ್ಷಣೆ ಮಾಡಿದ್ದು, ಮಂಜುನಾಥ ಅನ್ನೋ ಬಾಲಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದ.
ಆತನ ಮಾಹಿತಿ ಮೇರೆಗೆ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಮತ್ತು ಏಣಿ ಸಹಾಯದಿಂದ ವೃದ್ಧೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಕುತೂಹಲದಿಂದ ಬಾವಿ ಇಣುಕಿ ನೋಡಿದಾಗ ಬಾವಿಯಲ್ಲಿ ವೃದ್ಧೆಯನ್ನು ಗಮನಿಸಿದ್ದ ಬಾಲಕ ಮಂಜುನಾಥ ಹಿರಿಯ ಜೀವವನ್ನು ಉಳಿಸುವ ಪ್ರಯತ್ನ ಮಾಡಿದ.
50 ಅಡಿ ಆಳದ ಬಾವಿಯ ಕೆಸರಿನಲ್ಲಿ ವೃದ್ಧೆ ಸಿಲುಕಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದರು.
ಅವರನ್ನು ವನಮಾಲಾ ಕಲಕರ್ಣಿ ಎಂದು ಗುರುತಿಸಲಾಗಿದೆ.
ಮಧ್ಯಾಹ್ನದ ಸಮಯದಲ್ಲಿ
ಮನೆಯಿಂದ ನಾಪತ್ತೆಯಾಗಿದ್ದ ಅವರು ಬಾವಿಯಲ್ಲಿ ಪತ್ತೆಯಾಗಿದ್ದರು.
ಅಸ್ವಸ್ಥ ವೃದ್ಧೆಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ.
ಬಾಲಕ ಮಂಜುನಾಥನಿಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ ಹಾಗೂ ಸ್ಥಳೀಯ ಜನತೆ ಅಭಿನಂದನೆ ಸಲ್ಲಿಸಿದರು.