ಬೆಳಗಾವಿ prajakiran.com : ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಭಕ್ತರ ದರ್ಶನಕ್ಕೆ ನಿಷೇಧ ಹೇರಲಾಗಿದ್ದ ದೇಶದ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ತಾಯಿ ದರ್ಶನ ಭಾಗ್ಯ ಕೊನೆಗೂ 11 ತಿಂಗಳ ಬಳಿಕ ಭಕ್ತರಿಗೆ ಸಿಗಲಿದೆ.
ರಾಜ್ಯದ ಮುಜರಾಯಿ ಇಲಾಖೆಯು ತಕ್ಷಣವೇ ನಿಷೇಧ ಆದೇಶವನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯದ ಬಿಜೆಪಿ ಸರಕಾರಕ್ಕೆ ಗಡುವು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಷೇಧ ಆದೇಶವನ್ನು ಕೊನೆಗೂ ವಾಪಾಸ್ ಪಡೆದಿದೆ.
ಹಲವು ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ನಂತರ ದರ್ಶನ ಕರುಣಿಸಲು ಅವಕಾಶ ನೀಡಿದೆ.
ಈ ಹಿನ್ನೆಲೆಯಲ್ಲಿ ನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೈವವಾದ ಸವದತ್ತಿ ಯಲ್ಲಮ್ಮ ತಾಯಿಯ ದರ್ಶನ ಸುಮಾರು 11 ತಿಂಗಳ ಬಳಿಕ ನಾಳೆಯಿಂದ ಅಂದ್ರೆ ಫೆಬ್ರುವರಿ 1ರಿಂದ ದರ್ಶನಕ್ಕೆ ಮುಕ್ತವಾಗಲಿದೆ.
ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ದೇವಿಯ ಸಂಪ್ರದಾಯದಂತೆ ಜಾತ್ರೆ, ಉತ್ಸವ ನಡೆಸದಂತೆ ಕೇವಲ ಆವರಣದಲ್ಲಿ ನಡೆಯುವ ಪೂಜೆ, ವಿಧಿ ವಿಧಾನಗಳನ್ನು ಮಾತ್ರ ಆಚರಿಸುವಂತೆ ಆದೇಶಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಂತೆ ಸವದತ್ತಿ ಯಲ್ಲಮ್ಮ ತಾಯಿಯ ದೇವಿಯ ದೇವಸ್ಥಾನದಲ್ಲಿ ನಿಯಮಗಳನ್ನು ಪಾಲಿಸಲಾಗುವುದು ಎಂದು ಆಡಳಿತಾಧಿಕಾರಿ ಹಾಗೂ ವಿಭಾಗಾಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.