ಧಾರವಾಡ prajakiran.com : ಡ್ರಗ್ಸ್ ಪ್ರಕರಣದಲ್ಲಿ ಈಗ ಕೇವಲ ಇಬ್ಬರು ನಟಿಯರು ಮಾತ್ರ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ರಾಜಕಾರಣಿಗಳು, ಅವರ ಮಕ್ಕಳೂ ಭಾಗಿಯಾಗಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಡ್ರಗ್ಸ್ ಎನ್ನುವ ಪಿಡುಗಿಗೆ ಯುವ ಜನ ಅಂಟಿಕೊಂಡಿದೆ.
ಇದನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವ್ಯವಹಾರ. ಇದರ ಮೂಲ ಪತ್ತೆ ಮಾಡಬೇಕು. ಡ್ರಗ್ಸ್ ವ್ಯವಹಾರಕ್ಕೆ ನಾನು ಸಾಕಷ್ಟು ವಿರೋಧ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಹಿರಿಯರನ್ನು ಕಡೆಗಣಿಸಿಲ್ಲ :
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿಲ್ಲ. ಕರ್ನಾಟಕದ ಹಿರಿಯ ರಾಜಕಾರಣಿಗಳಿಗೆ ಅವರು ಮನ್ನಣೆಯನ್ನೇ ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ದಿನೇಶ ಗುಂಡೂರಾವ್ ಸೇರಿದಂತೆ ಇತರರಿಗೆ ಪಕ್ಷದಲ್ಲಿ ಸೋನಿಯಾ ಗಾಂಧಿ ಅವರು ಉನ್ನತ ಸ್ಥಾನ ನೀಡಿದ್ದಾರೆ.
ಪಕ್ಷ ಸಂಘಟನೆಗೆ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಅವರು ಬಳಕೆ ಮಾಡಿಕೊಳ್ಳಲಿದ್ದಾರೆ. ಪಕ್ಷದಲ್ಲಿ ಯಾವ ಹಿರಿಯ ನಾಯಕರನ್ನೂ ಕಡೆಗಣಿಸಿಲ್ಲ ಎಂದರು.
ಕೊರೊನಾ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆದಿವೆ. ಆ ವಿಷಯವನ್ನು ಜನರಿಂದ ಮರೆಮಾಚುವುದಕ್ಕಾಗಿ ಈಗ ಡ್ರಗ್ಸ್ ಪ್ರಕರಣದ ಪ್ರಚಾರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಹಸಿರು ಶಾಲು ಹಾಕಿಕೊಂಡು ಗದ್ದುಗೆಗೆ ಏರಿದ ಯಡಿಯೂರಪ್ಪ ರೈತರನ್ನು ಈಗ ಮರೆತಿದ್ದಾರೆ.
ಸರ್ಕಾರ ಕೂಡಲೇ ಕೇಂದ್ರದಿಂದ ಹೆಚ್ಚಿನ ಹಣಕಾಸಿನ ನೆರವು ತಂದು ರಾಜ್ಯದ ಅಭಿವೃದ್ಧಿ ಹಾಗೂ ರೈತರ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ಎಸ್.ಆರ್.ಪಾಟೀಲ ಆಗ್ರಹಿಸಿದರು.