*ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶ*
*ಧಾರವಾಡದ ರೌಡಿಶೀಟರ್ ಅಜಯ್ ಕೊರವರ ಗಡಿಪಾರು*
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ
ಅವಳಿ ನಗರ ವ್ಯಾಪ್ತಿಯಲ್ಲಿ ರೌಡಿಸಂ ಚಟುವಟಿಕೆಗಳಲ್ಲಿ ಭಾಗಿಯಾದ ರೌಡಿಗಳ ಗಡಿಪಾರು ಮಾಡುವಂತಹ ಕಠಿಣ ಕ್ರಮ ಮುಂದುವರೆದಿದೆ. ಧಾರವಾಡದ ಮತ್ತೊಬ್ಬ ರೌಡಿಶೀಟರ್ ಅಜಯ ಕೊರವರನನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮತ್ತೋರ್ವ ರೌಡಿಶೀಟರ್ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಸುಮಾರು ದಿನಗಳಿಂದ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಧಾರವಾಡದ ಶ್ರೀರಾಮ ನಗರ ನಿವಾಸಿಯಾಗಿರುವ 30 ವರ್ಷದ ಅಜಯ ತಂದೆ ಪರಶುರಾಮ ಕೊರವರ, ಎಂಬಾತನನ್ನು ಫೆ. 23 ರಿಂದ 6 ತಿಂಗಳ ಅವಧಿಗೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ರೌಡಿಶೀಟರ್ ಅಜಯ ಕೊರವರ ಗುಂಪು ಕಟ್ಟಿಕೊಂಡು ಮುಗ್ಧ ಜನರಿಗೆ ಬೆದರಿಸುವುದು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿ ರೌಡಿತನದಿಂದ ಬೆದರಿಕೆ ಹಾಕಿ, ಹಲ್ಲೆ ಮಾಡಿ ಆಸ್ತಿಯನ್ನು ಕಬಳಿಸುವಿಕೆ, ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸುವಂತಹ ಪ್ರವೃತ್ತಿಯನ್ನು ಹೊಂದಿದ್ದ.
ಅವನ ಮೇಲೆ ಈಗಾಗಲೇ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಸಹ ತೆರೆಯಲಾಗಿದೆ.
ಇದರೊಂದಿಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ಎದುರುಗಾರರಿಗೆ ಬೆದರಿಕೆ ಸಹ ಹಾಕುವುದಲ್ಲದೇ, ಸಾರ್ವಜನಿಕರ ಎದುರು ರೌಡಿಸಂ ತೋರ್ಪಡಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಎಂದು ಅವರು ವಿವರಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿದ್ದ ಈತನ ಮೇಲೆ ತೀವ್ರ ನಿಗಾ ಇಡಲಾಗಿತ್ತು.
ಈತನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಸಮಾಜದಲ್ಲಿ ಆರೋಗ್ಯಕರ ವಾತಾವರಣ ಕಾಯ್ದುಕೊಳ್ಳಲು ಹಾಗೂ ಈತನಿಗೆ ತಕ್ಕಪಾಠ ಕಲಿಸುವ ಉದ್ದೇಶದಿಂದ 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದ್ದಾರೆ
ಈ ಮೂಲಕ ನಗರದಲ್ಲಿ ಯಾರಾದರು ರೌಡಿಸಂ ವರ್ತನೆಯನ್ನು ತೋರಿದರೆ ಕಠಿಣ ಕ್ರಮ ನಿಶ್ಚಿತ ಎಂಬ ಎಚ್ಚರಿಕೆ ರವಾನಿಸಿದ್ದಾರೆ.